ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಚೀನ ಶಿಲ್ಪಗಳಲ್ಲಿ ಉಪಗ್ರಹಗಳ ಉಲ್ಲೇಖ’

ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ. ರವಿ
Last Updated 9 ಮಾರ್ಚ್ 2020, 23:20 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಪೂರ್ವಿಕರು 11,12 ಮತ್ತು 13ನೇ ಶತಮಾನಗಳಲ್ಲಿ ಕೆತ್ತಿರುವ ಕಲಾಕೃತಿಗಳಲ್ಲಿಯೇ ಉಪಗ್ರಹಗಳ ಉಲ್ಲೇಖವಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ನಾವು ಎಷ್ಟು ತಿಳಿದುಕೊಂಡಿದ್ದೆವು ಎಂಬುದಕ್ಕೆ ಇದು ಸಾಕ್ಷಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸೋಮವಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ರ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಟ್ಟದ ಮೇಲೆ ಏಕಶಿಲೆಯಲ್ಲಿ ಕೆತ್ತಲಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ, ಬೇಲೂರು– ಹಳೇಬೀಡಿನ ಶಿಲ್ಪಗಳು ನಮ್ಮ ಕಲಾ ಶ್ರೀಮಂತಿಕೆಯ ಪ್ರತಿಬಿಂಬಗಳು’ ಎಂದರು.

‘ಸಾಮ್ರಾಜ್ಯಗಳು, ರಾಜರು, ರಾಜ ಮನೆತನಗಳು ಅಳಿದಿವೆ. ಆದರೆ, ಅವರ ಕಾಲದಲ್ಲಿನ ವಾಸ್ತುಶಿಲ್ಪಗಳಿಗೆ ಅಳಿವಿಲ್ಲ’ ಎಂದು ಅವರು ಹೇಳಿದರು.

‘ನಮ್ಮ ಶಿಲ್ಪಕಲಾ ಶ್ರೀಮಂತಿಕೆಯನ್ನು ಕಂಡು ಕೆಲವರು ಹೊಟ್ಟೆಕಿಚ್ಚು ಪಟ್ಟರು. ಕೊನೆಗೆ, ವಾಸ್ತುಶಿಲ್ಪಗಳನ್ನು ನಾಶ ಮಾಡಿದರು. ಕಲಾಕೃತಿಗಳನ್ನು ನಾಶ ಮಾಡಿದರೂ, ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದರು.

ಭರವಸೆ:‘ಶಿಲ್ಪಕಲಾ ಅಕಾಡೆಮಿಯ ಬೆಳ್ಳಿಹಬ್ಬಕ್ಕೆ ಹೆಚ್ಚು ಅನುದಾನ ನೀಡಲಾಗುವುದು. ಬೆಳ್ಳಿಹಬ್ಬವನ್ನು ಶಿಲ್ಪಿಗಳ ಹಬ್ಬದಂತೆ, ಕಲೆಯ ಜಾತ್ರೆಯಂತೆ ಆಚರಿಸಲಾಗುವುದು’ ಎಂದು ಭರವಸೆ ನೀಡಿದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್, ‘ಈಗ ಸಾಂಪ್ರದಾಯಿಕ-ಆಧುನಿಕ ಕಲೆಗಳ ಸಮ್ಮಿಶ್ರಣ ಕಾಣುತ್ತಿದ್ದೇವೆ. ಸಾಂಪ್ರದಾಯಿಕ ಕಲೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಶಿಲ್ಪಕಲಾ ಅಕಾಡೆಮಿಗೆ, ಆಧುನಿಕ ಕಲೆಗಳನ್ನು ಲಲಿತ ಕಲಾ ಅಕಾಡೆಮಿ ವ್ಯಾಪ್ತಿಗೆ ನೀಡುವಂತಾಗಬೇಕು’ ಎಂದರು.

ಪ್ರಶಸ್ತಿ ಪ್ರದಾನ: ಅಮಿತ್‌ ನಾಯಕ, ಲಕ್ಷ್ಮಣರಾವ್‌ ಜಾಧವ್, ಎಸ್.ಮಧುಸೂದನ, ಸುನೀಲ್‌ ಮಿಶ್ರಾ, ಸಂತೋಷಕುಮಾರ ಚಿತ್ರಗಾರ, ಬಿ.ಎಸ್. ರಾಜೇಂದ್ರಪ್ರಸಾದ್, ಮಹದೇವಚಾರಿ, ಎಸ್. ಭರತ್, ಈರಣ್ಣ ವಿಶ್ವಕರ್ಮ ಅವರಿಗೆ ಹದಿನೈದನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ನೀಡಲಾಯಿತು.

*
ಶಿಲ್ಪಕಲಾ ಅಕಾಡೆಮಿಯ ಬೆಳ್ಳಿಹಬ್ಬ ಸಮೀಪಿಸುತ್ತಿದೆ. ರಾಜ್ಯ ಸರ್ಕಾರ ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು
-ವೀರಣ್ಣ ಮಾ. ಅರ್ಕಸಾಲಿ, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT