ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವು| ಕಾನೂನು ಹೋರಾಟ ಬೆಂಬಲಿಸಲು ಸಿದ್ಧ: ಎಚ್‌ಡಿಕೆ

ಶಿವರಾಮ ಕಾರಂತ ಬಡಾವಣೆ– ಮನೆಗಳ ಧ್ವಂಸ ಬೇಡ
Last Updated 1 ಆಗಸ್ಟ್ 2021, 0:49 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಬಡ, ಮಧ್ಯಮ ಹಾಗೂ ರೈತರ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದೌರ್ಜನ್ಯ ನಡೆಸುತ್ತಿದೆ. ಈ ಸಂಬಂಧ ಕಾನೂನಾತ್ಮಕವಾಗಿ ಸ್ಪಷ್ಟ ಚಿತ್ರಣ ಹೊರಬೀಳುವವರೆಗೆ ಈ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಕೆಡವಬಾರದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ಕಳೆದುಕೊಂಡವರ ಜೊತೆಗೆದಾಸರಹಳ್ಳಿ ಕ್ಷೇತ್ರದ ಸೋಮಶೆಟ್ಟಿಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಂತ್ವನ ಸಭೆಯಲ್ಲಿ ಅವರು ಮಾತನಾಡಿದರು.

‘ಸಂತ್ರಸ್ತರ ಪರವಾಗಿ ಕಾನೂನು ಹೋರಾಟಕ್ಕೆ ಕೈಜೋಡಿಸುತ್ತೇನೆ. ಮುಖ್ಯಮಂತ್ರಿಯವರು, ಹಿರಿಯ ಅಧಿಕಾರಿಗಳು ಹಾಗೂ ಈ ಸಂಬಂಧ ರಚನೆಗೊಂಡಿರುವ ಸಮಿತಿ ಅಧ್ಯಕ್ಷರೊಂದಿಗೆ ಈ ಕುರಿತು ಚರ್ಚಿಸಿ ಮನೆ ಕೆಡಹುವುದನ್ನು ನಿಲ್ಲಿಸುವಂತೆ ಕೋರುತ್ತೇನೆ’ ಎಂದರು.

‘ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ಕಳೆದುಕೊಂಡವರಿಂದ ಈಗಷ್ಟೇ ಅರ್ಜಿ ಪಡೆಯಲಾಗುತ್ತಿದೆ. ಅದರ ಪರಿಶೀಲನೆಯನ್ನೂ ಮಾಡದೇ, ಇಲ್ಲಿ ಕಟ್ಟಿದ ಮನೆಗಳನ್ನು ಏಕಾಏಕಿ ಬೀಳಿಸುವುದು ಸರಿಯಲ್ಲ. ಈ ಭಾಗದ ಶಾಸಕರೇ ಬಿಡಿಎ ಅಧ್ಯಕ್ಷರಾಗಿದ್ದಾರೆ. ಅವರೇ ಇಂತಹ ಕೆಲಸಕ್ಕೆ ಮುಂದಾಗಿರುವುದು ದುರದೃಷ್ಟಕರ’ ಎಂದೂ ಬೇಸರ ವ್ಯಕ್ತಪಡಿಸಿದರು.

‘30 ಸಾವಿರ ಕುಟುಂಬಗಳನ್ನು ಬೀದಿಗೆ ತಳ್ಳಿ 25 ಸಾವಿರ ನಿವೇಶನಗಳ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ’ ಎಂದು ಪ್ರಶ್ನಿಸಿದ ಅವರು, ‘ಈ ಬಡಾವಣೆ ನಿರ್ಮಾಣ ಕೈಬಿಡುವಂತೆ ಹೈಕೋರ್ಟ್ 2014 ರಲ್ಲಿ ಆದೇಶ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್‌ಗೆ ಸುಳ್ಳು ದಾಖಲೆಗಳನ್ನು ನೀಡಿದ ಬಿಡಿಎ, ರೈತ ವಿರೋಧಿ ಆದೇಶಗಳು ಪ್ರಕಟವಾಗುವುದಕ್ಕೆ ಕಾರಣವಾಗಿದೆ’ ಎಂದೂ ದೂರಿದರು.

‘ಈಗಲೂ ಅಡ್ವೊಕೇಟ್ ಜನರಲ್ ಮೂಲಕ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಡಬಹುದು’ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಸ್ಥಳೀಯ ಮುಖಂಡರಾದ ನಂಜುಂಡಪ್ಪ, ನಾಗಭೂಷಣ್, ಕೆ.ಸಿ. ವೆಂಕಟೇಶ್, ಚರಣ್ ಗೌಡ ಹಾಜರಿದ್ದರು. ಭೂಮಿ ಕಳೆದುಕೊಂಡ ಸಂತ್ರಸ್ತರು ಸಭೆಯಲ್ಲಿ ಇದ್ದರು.

‘ನಟ ದರ್ಶನ್‌, ಶಿವಶಂಕರಪ್ಪಗೆ ಅನ್ವಯಿಸುವುದಿಲ್ಲವೆ?’

‘ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಂದಿಟ್ಟುಕೊಂಡು ಬಡವರ ಮನೆಗಳನ್ನು ಕೆಡವಲಾಗುತ್ತಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದವರ ಮನೆಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹಸಿರು ಮಂಡಳಿ ತೀರ್ಪು ನೀಡಿದಾಗಲೂ ಬಡವರ ಮನೆಗಳನ್ನು ಮಾತ್ರ ಧ್ವಂಸಗೊಳಿಸಲಾಯಿತು. ನಟ ದರ್ಶನ್, ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಮಾತ್ರ ಈ ತೀರ್ಪನ್ನು ಅನ್ವಯಿಸಲಿಲ್ಲ’ ಎಂದು ಶಾಸಕ ಆರ್. ಮಂಜುನಾಥ್‌ ದೂರಿದರು.

‘ಈ ಜನರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದರೆ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ತಾವು ಉಳುಮೆಗಾಗಿ ಇಟ್ಟುಕೊಂಡಿದ್ದ ಜಾಗದಲ್ಲಿ ಮನೆ ಕಟ್ಟಿದ್ದಾರೆ’ ಎಂದರು.

‘ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರು ಅರ್ಜಿ ಸಲ್ಲಿಸಲು 2022 ಫೆ.15ರವರೆಗೆ ಅವಕಾಶವಿದೆ. ಆದರೆ ಬಿಡಿಎ ಅಧಿಕಾರಿಗಳು ನ್ಯಾಯಾಲಯದ ಆದೇಶದ ನೆಪದಲ್ಲಿ ಮನೆಗಳನ್ನು ಉರುಳಿಸಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT