ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುತ್ತಿಗೆ ಮಿತಿ ₹2 ಕೋಟಿಗೆ ಹೆಚ್ಚಳ’

ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಮಾವೇಶದಲ್ಲಿ ಭರವಸೆ
Last Updated 2 ಜುಲೈ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು:‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹50 ಲಕ್ಷ ಮೊತ್ತದವರೆಗಿನ ಕಾಮಗಾರಿಯ ಗುತ್ತಿಗೆಯಲ್ಲಿ ಶೇ 24.1ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಈ ಮಿತಿಯನ್ನು ₹2 ಕೋಟಿಯವರೆಗೂ ಏರಿಸಲು ಒತ್ತಡ ಹೇರಲಾಗುವುದು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಈ ಮಿತಿಯನ್ನು ₹1 ಕೋಟಿಗೆ ಏರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದೆ. ಅದು ಇನ್ನೂ ಜಾರಿಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡಿ, ಶೀಘ್ರದಲ್ಲಿ ಅನುಷ್ಠಾನಕ್ಕೆ ಬರುವಂತೆ ಮಾಡುತ್ತೇನೆ’ ಎಂದು ಹೇಳಿದರು.

‘ಜನಸಂಖ್ಯೆಗೆ ಅನುಗುಣವಾಗಿ ಸಂಪತ್ತು ಹಂಚಿಕೆಯಾಗಬೇಕು. ಹೀಗಾಗಿ, ಗುತ್ತಿಗೆಯಲ್ಲಿಯೂ ಮೀಸಲಾತಿ ನೀಡಿದ್ದೇವೆ. ಈ ಕುರಿತು ಕಾನೂನು ಜಾರಿ ಮಾಡಿದ ಮೊದಲ ರಾಜ್ಯ ನಮ್ಮದು’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಡ್ತಿಯಲ್ಲಿ ಮೀಸಲಾತಿ ತರುವುದಕ್ಕೆ ಮುಂದಾಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ಗೆ ಹೋದರು. ಈ ಕುರಿತು ನಾವೇ ಕಾನೂನು ರೂಪಿಸಿ, ರಾಷ್ಟ್ರಪತಿ ಅಂಕಿತ ಪಡೆಯಲಾಯಿತು. ಸುಪ್ರೀಂ ಕೋರ್ಟ್‌ ಕೂಡ ಬಡ್ತಿ ಮೀಸಲಾತಿ ಆದೇಶವನ್ನು ಎತ್ತಿ ಹಿಡಿದಿದೆ’ ಎಂದರು.

ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾದೇವ ಸ್ವಾಮಿ ಮಾತನಾಡಿ, ‘₹1 ಕೋಟಿಯವರೆಗಿನ ಕಾಮಗಾರಿಯ ಗುತ್ತಿಗೆಯಲ್ಲಿಯೂ ಮೀಸಲಾತಿ ದೊರಕಿಸುವುದಕ್ಕೆ ಮುಂದಿನ ಅಧಿವೇಶನದಲ್ಲಿಯೇ ಅನುಮೋದನೆ ದೊರಕಿಸಿ, ಜಾರಿ ಮಾಡಿಸಬೇಕು’ ಎಂದು ವಿನಂತಿಸಿದರು.

‘ಗುತ್ತಿಗೆಯಲ್ಲಿ ಮೀಸಲಾತಿ ದೊರೆತ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದಾರೆ. ಮೊದಲು 3 ಸಾವಿರ ಗುತ್ತಿಗೆದಾರರಿದ್ದರು. ಈಗ ಅವರ ಸಂಖ್ಯೆ 10 ಸಾವಿರಕ್ಕೆ ಏರಿದೆ’ ಎಂದರು.

‘ಕೇಂದ್ರ ₹2 ಲಕ್ಷ ಕೋಟಿ ನೀಡಲಿ’

‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನಾ ಕಾಯ್ದೆಯಡಿ, ಈ ಸಮುದಾಯದ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ₹86 ಸಾವಿರ ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ ₹30 ಸಾವಿರ ಕೋಟಿ ಇಟ್ಟಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ₹56 ಸಾವಿರ ಕೋಟಿ ಮಾತ್ರ ತೆಗೆದಿರಿಸಿದೆ. ಕೇಂದ್ರ ಸರ್ಕಾರ ಕನಿಷ್ಠ 2 ಲಕ್ಷ ಕೋಟಿಯಾದರೂ ನೀಡಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

***

ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದು ಧರ್ಮಸ್ಥಳದ ಮಂಜುನಾಥ ಅಲ್ಲ. ನಮ್ಮ ಸಿದ್ದರಾಮಯ್ಯ. ಈ ಸಂದರ್ಭದಲ್ಲಿ ನಾವು ಅವರ ಕೈ ಬಲಪಡಿಸುವ ಅಗತ್ಯವಿದೆ.

– ಮಹಾದೇವ ಸ್ವಾಮಿ,ರಾಜ್ಯ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT