ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ ವಿದ್ಯಾರ್ಥಿನಿ ‘ಟರ್ಬನ್‌’ ಧರಿಸಿದ್ದಕ್ಕೆ ತಗಾದೆ

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಘಟನೆ l ಶಿಕ್ಷಣ ಇಲಾಖೆ ಅಧಿಕಾರಿಗಳ ಭೇಟಿ
Last Updated 24 ಫೆಬ್ರುವರಿ 2022, 21:16 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಸಿಖ್‌ ವಿದ್ಯಾರ್ಥಿನಿಯೊಬ್ಬರು ಧರಿಸಿದ್ದ ‘ಟರ್ಬನ್‌’ ತೆಗೆಸುವಂತೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತಗಾದೆ ತೆಗೆದಿದ್ದಾರೆ. ಈ ಘಟನೆ ನಡೆದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಕಾಲೇಜು ಆಡಳಿತ ಮಂಡಳಿ ಪಾಲಿಸುತ್ತಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರನ್ನು ಹಿಜಾಬ್ ತೆಗೆಯಿಸಿ, ನಂತರ ತರಗತಿಗೆ ಪ್ರವೇಶಿಸುವಂತೆ ನೋಡಿಕೊಳ್ಳುತ್ತಿದೆ. ಈ ನಡುವೆಯೇ ಸಿಖ್ ವಿದ್ಯಾರ್ಥಿನಿಯೊಬ್ಬರು ‘ಟರ್ಬನ್’ ಧರಿಸಿದ್ದಕ್ಕೆ ಕೆಲ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವಿಚಾರವಾಗಿ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ಪಿ.ಯು ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯೂ ಆಗಿರುವ ಸಿಖ್‌ ವಿದ್ಯಾರ್ಥಿನಿ, ನಿತ್ಯವೂ ಟರ್ಬನ್‌ ಧರಿಸಿ ಬರುತ್ತಾರೆ. ಬುಧವಾರವೂ ತರಗತಿಗೆ ಟರ್ಬನ್‌ ಧರಿಸಿಯೇ ಹಾಜರಾಗಿದ್ದರು. ‌ಟರ್ಬನ್ ತೆಗೆಸುವಂತೆ ಪ್ರಾಂಶುಪಾಲರನ್ನು ಒತ್ತಾಯಿಸಿದ್ದ ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು, ‘ನಮ್ಮ ಹಿಜಾಬ್ ತೆಗೆಸಿ ತರಗತಿಯೊಳಗೆ ಕಳುಹಿಸುತ್ತಿರಾ. ಆದರೆ, ಟರ್ಬನ್‌ ಧರಿಸಿರುವ ಅವರನ್ನು ಏಕೆ ಒಳಗೆ ಬಿಡುತ್ತೀರಿ ಎಂಬುದಾಗಿ ಪ್ರಶ್ನಿಸಿದ್ದರು’ ಎಂದು ಕಾಲೇಜು ಮೂಲಗಳು ಹೇಳಿವೆ.

‘ಕೆಲವರ ಒತ್ತಾಯಕ್ಕೆ ಮಣಿದಿದ್ದ ಪ್ರಾಂಶುಪಾಲರು, ‘ಟರ್ಬನ್‌ ತೆಗೆದು ತರಗತಿ ಒಳಗೆ ಹೋಗಬಹುದೇ’ ಎಂದು ಸಿಖ್‌ ವಿದ್ಯಾರ್ಥಿನಿಯನ್ನು ಕೇಳಿದ್ದರು. ಆಗ ವಿದ್ಯಾರ್ಥಿನಿ, ‘ನಮ್ಮದು ಸಿಖ್‌ ಸಮುದಾಯ. ಟರ್ಬನ್ ಧರಿಸುವುದು ಕಡ್ಡಾಯ. ಇದನ್ನು ತೆಗೆಯುವುದಿಲ್ಲ’ ಎಂದಿದ್ದರು. ವಿಷಯ ತಿಳಿದು ಕಾಲೇಜಿಗೆ ಬಂದಿದ್ದ ಪೋಷಕರು, ಅದೇ ಮಾತು ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕಾಲೇಜಿಗೆ ಬಂದಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಪೋಷಕರು, ಟರ್ಬನ್‌ ರೀತಿಯಲ್ಲೇ ಹಿಜಾಬ್‌ಗೂ ಅವಕಾಶ ನೀಡಬೇಕೆಂದು ಕೋರಿದ್ದರು. ಹಿಜಾಬ್‌ಗೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದ್ದಪ್ರಾಂಶುಪಾಲರು ಅವರನ್ನು ಹಿಂದಕ್ಕೆ ಕಳುಹಿಸಿದ್ದರು’ ಎಂದು ಮೂಲಗಳು ವಿವರಿಸಿವೆ.

ಉಪನಿರ್ದೇಶಕ ಭೇಟಿ: ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಾಲೇಜಿಗೆ ಭೇಟಿ ನೀಡಿದರು. ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

‘ಹೈಕೋರ್ಟ್ ಆದೇಶ ಪಾಲನೆ’

‘ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ. ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾಗುತ್ತಿದ್ದಾರೆ’ ಎಂದು ಕಾಲೇಜು ಪ್ರಾಂಶುಪಾಲರಾದ ಬಬಿತಾ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿದ್ಯಾರ್ಥಿನಿಯೊಬ್ಬರು ಟರ್ಬನ್ ಧರಿಸಿದ್ದರು. ಹಿಜಾಬ್ ತೆಗೆಸಿದ ರೀತಿಯಲ್ಲೇ ಟರ್ಬನ್ ತೆಗೆಸುವಂತೆ ಕೆಲ ವಿದ್ಯಾರ್ಥಿನಿಯರು ಮನವಿ ಮಾಡಿದ್ದರು. ಆ ವಿದ್ಯಾರ್ಥಿನಿಯನ್ನು ಕೇಳಿದಾಗ, ಟರ್ಬನ್‌ ತೆಗೆಯುವುದಿಲ್ಲ ಎಂದರು. ಇದು ನಮ್ಮ ಮನವಿ ಮಾತ್ರವಾಗಿತ್ತು. ಟರ್ಬನ್ ತೆಗೆಸುವ ಉದ್ದೇಶವಿರಲಿಲ್ಲ. ಸದ್ಯಕ್ಕೆ ಕಾಲೇಜಿನಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡನೆ

‘ಸಿಖ್‌ ಸಮುದಾಯದ ವಿದ್ಯಾರ್ಥಿನಿ ಟರ್ಬನ್ ಧರಿಸುವುದಕ್ಕೆ ಕಾಲೇಜು ಆಡಳಿತ ಮಂಡಳಿ ತಡೆಯೊಡ್ಡಿದ್ದು, ವೈಯುಕ್ತಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹರಣ’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆ ಹೇಳಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ, ‘ಹೈಕೋರ್ಟ್ ಮಧ್ಯಂತರ ಆದೇಶವನ್ನು ದುರುಪಯೋಗಪಡಿಸುತ್ತಿರುವ ಇಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಟರ್ಬನ್ ಸಾಂವಿಧಾನಿಕ ಹಕ್ಕು’

‘ಟರ್ಬನ್ ಧರಿಸುವುದು ಸಿಖ್ ಸಮುದಾಯದವರ ಸಾಂವಿಧಾನಿಕ ಹಕ್ಕು. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಹಿಜಾಬ್‌ಗೆ ಮಾತ್ರ ಸಂಬಂಧಿಸಿದ್ದು' ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿರುವ ಅವರು, ಈ ಬಗ್ಗೆ ವರದಿ ಪಡೆಯುವುದಾಗಿ ತಿಳಿಸಿದ್ದಾರೆ.

‘ಹಿಜಾಬ್‌ ಚರ್ಚೆಗೆ ಹಿಂದೇಟು ಏಕೆ’

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಪಿಳ್ಳೆ ನೆವ ಮುಂದಿಟ್ಟುಕೊಂಡು ಹಿಜಾಬ್‌ ವಿಷಯದ ಬಗ್ಗೆ ಚರ್ಚಿಸದೇ ವಿಧಾನಮಂಡಲದ ಕಲಾಪವನ್ನು ಬಹಿಷ್ಕರಿಸಿದರು. ಅವರು ಆ ವಿಷಯದ ಬಗ್ಗೆ ಚರ್ಚೆ ನಡೆಸಲು ಹಿಂದೇಟು ಹಾಕಿದ್ದು ಏಕೆ ಎಂದು ಉನ್ನತ ಶಿಕ್ಷಣ ಸಚಿವರ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನಿಸಿದರು.

ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಲಾಯಿತು ಎಂದು ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಮತ್ತು ಡಿ.ಕೆ.ಶಿವಕುಮಾರ್‌ ಅವರು ಸುಳ್ಳು ಮಾಹಿತಿಯನ್ನು ಪದೇ ಪದೇ ಹೇಳಿ ಸತ್ಯ ಎಂಬಂತೆ ಬಿಂಬಿಸಿದರು. ಆ ಮೂಲಕ ವಿಧಾನಮಂಡಲದ ಕಲಾಪ ನಡೆಯದಂತೆ ತಡೆದು ಸಾರ್ವಜನಿಕರ ಹಣ ಪೋಲು ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಕಾಂಗ್ರೆಸ್‌ನಲ್ಲಿ ಹಿಂದೆ ವೀರೇಂದ್ರ ಪಾಟೀಲ್, ಕೆ.ಸಿ.ರೆಡ್ಡಿ ಮತ್ತಿತರ ಮುಖಂಡರು ಒಂದು ಸ್ಪಷ್ಟ ಸಂಸ್ಕೃತಿ, ಆಚಾರವನ್ನು ಇಟ್ಟುಕೊಂಡಿದ್ದರು. ರಚನಾತ್ಮಕವಾಗಿ ಕೆಲಸ ಮಾಡಬೇಕಾದ ಕಾಂಗ್ರೆಸ್‌ ಎಲ್ಲ ವಿಷಯಗಳಲ್ಲೂ ರಾಜಕೀಯ ಬೆರೆಸುತ್ತಿದೆ. ಕಾನೂನು, ವ್ಯವಸ್ಥೆಗೆ ಗೌರವ ಕೊಡುತ್ತಿಲ್ಲ. ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆ ಮಾಡಲು ಶಿವಕುಮಾರ್‌ ಮುಂದಾಗಿದ್ದರು. ಮಾತಿನಲ್ಲಿ ವಿಚಾರ ಮಂಡಿಸದೇ ದೈಹಿಕವಾಗಿ ಶಕ್ತಿ ಪ್ರಹಾರ ಮಾಡುವ ಪ್ರವೃತ್ತಿ ತೋರಿದರು ಎಂದು ಅಶ್ವತ್ಥನಾರಾಯಣ ಹರಿಹಾಯ್ದರು.

ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಜನರು ಈಗಾಗಲೇ ಪಾಠ ಕಲಿಸಿದ್ದಾರೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸ ಮುಂದುವರಿಸಲು ಅಡ್ಡಿ ಪಡಿಸುವುದರ ಜತೆಗೆ ಅವರ ಉತ್ತಮ ಭವಿಷ್ಯಕ್ಕೆ ಕಲ್ಲು ಹಾಕುವ ದುರುದ್ದೇಶದ ಪ್ರಯತ್ನ ಇದಾಗಿದೆ ಎಂದೂ ಹೇಳಿದರು.

ಪಿಎಫ್‌ಐ ಮತ್ತಿತ್ತರ ಸಮಾಜದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷವು ರಕ್ಷಣೆ ನೀಡಿ ಪೋಷಿಸಿಕೊಂಡು ಬಂದಿವೆ. ಇಂತಹ ರಾಷ್ಟ್ರದ್ರೋಹಿ ಸಂಘಟನೆಗಳ ಜತೆ ಬಿಜೆಪಿ ಎಂದಿಗೂ ಕೈಜೋಡಿಸುವುದಿಲ್ಲ ಎಂದರು.

* ಸಿಖ್‌ ವಿದ್ಯಾರ್ಥಿನಿ ಟರ್ಬನ್‌ ಧರಿಸುವುದಕ್ಕೆಮುಸ್ಲಿಂ ಸಮಯದಾಯದ ಕೆಲ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಟರ್ಬನ್ ತೆಗೆಯುವಂತೆ ಒತ್ತಡ ಹೇರಿರಲಿಲ್ಲ.

-ಡಾ. ಎಂ. ಜೆನಿವ್ಹೀವ್, ಕಾಲೇಜು ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT