ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮಾರ್ಟ್‌ ಸಿಟಿ: ಮುಗಿಯಲು ಬೇಕಿನ್ನೂ ಸಮಯ

ಜೂನ್‌ 30ಕ್ಕೆ ಮುಗಿಯಲಿರುವ 2ನೇ ಗಡುವು; ಅಂತಿಮ ಹಂತ ತಲುಪದ 5 ಯೋಜನೆಗಳು
Published 27 ಮೇ 2024, 23:36 IST
Last Updated 28 ಮೇ 2024, 3:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಸ್ಮಾರ್ಟ್‌ ಸಿಟಿ’ ಯೋಜನೆಗಳು ಮುಗಿಸಲು ನೀಡಲಾಗಿದ್ದ ಎರಡನೇ ವಿಸ್ತರಣೆ ಗಡುವು ಮುಗಿಯುತ್ತಿದ್ದರೂ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಯೋಜಿತ ಕಾಮಗಾರಿಗಳೆಲ್ಲವೂ ಅನುಷ್ಠಾನವಾಗಲು ಇನ್ನೂ ಒಂದು ವರ್ಷವಾದರೂ ಬೇಕು.

ಕೇಂದ್ರ ಸರ್ಕಾರದ ಮೂಲ ಆಶಯದಂತೆ ‘ಸ್ಮಾರ್ಟ್‌ ಸಿಟಿ’ ಯೋಜನೆ 2022ರ ಜೂನ್‌ 30ರಂದೇ ಮುಗಿಯಬೇಕಿತ್ತು. ಕೋವಿಡ್‌ ಕಾರಣ ನೀಡಿ ಒಂದೂವರೆ ವರ್ಷ ಅವಧಿಯನ್ನು ವಿಸ್ತರಿಸಲಾಗಿತ್ತು. ಆ ಸಮಯಕ್ಕೂ ಕಾಮಗಾರಿ ಮುಗಿಯದ ಕಾರಣ, ಈ ವರ್ಷದ ಜೂನ್‌ 30ರವರೆಗೆ ಗುಡುವು ನೀಡಲಾಗಿದೆ. ಆದರೆ, ‘ಬೆಂಗಳೂರು ಸ್ಮಾರ್ಟ್ ಸಿಟಿ’ ಯೋಜನೆಯ ಇನ್ನೂ ಐದು ಕಾಮಗಾರಿಗಳು ಅಂತಿಮ ಹಂತ ತಲುಪಿಲ್ಲ. ಬಹು ಅಂತಸ್ತಿನ ಕಾರು ಪಾರ್ಕಿಂಗ್‌ ಕಟ್ಟಡವಂತೂ ಇನ್ನೂ ‘ಫೌಂಡೇಷನ್‌’ ಹಂತದಲ್ಲಿದೆ.

‘ಸ್ಮಾರ್ಟ್‌ ಸಿಟಿ’ಯಲ್ಲಿ ಒಟ್ಟು 46 ಯೋಜನೆಗಳಿದ್ದು, ಇದರಲ್ಲಿ ಈಗಾಗಲೇ ಶೇ 88ರಷ್ಟು ಹಣವನ್ನೂ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. 41 ಯೋಜನೆಗಳು ಮುಗಿದಿದೆ ಎಂದು ‘ಸ್ಮಾರ್ಟ್‌ ಸಿಟಿ’ ಅಧಿಕಾರಿಗಳು ಹೇಳುತ್ತಿದ್ದರೂ, ಇದರಲ್ಲೂ ಏಳು ಯೋಜನೆಗಳಿಗೆ ಇನ್ನೂ ಪೂರ್ಣ ಹಣ ಬಿಡುಗಡೆಯಾಗಿಲ್ಲ. ಟೆಂಡರ್‌ಶ್ಯೂರ್‌ ರಸ್ತೆ ಯೋಜನೆಯಲ್ಲಿ ಅವೆನ್ಯೂ ರಸ್ತೆ ಕಾಮಗಾರಿ ಕಳೆದ ವರ್ಷವಿದ್ದ ಸ್ಥಿತಿಯಲ್ಲೇ ಇದೆ. ಜಲಮಂಡಳಿ ನಡುವೆ ‘ಸ್ಮಾರ್ಟ್ ಸಿಟಿ’ ಕಂಪನಿ ಸಮನ್ವಯ ಸಾಧಿಸಲಾಗದೆ ಕಾಮಗಾರಿ ಮುಂದುವರಿದಿಲ್ಲ. ಜನರಿಗೆ ನಿತ್ಯವೂ ಇಲ್ಲಿ ಸಂಕಷ್ಟ ಎದುರಾಗುತ್ತಿದೆ.

ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಸಭಾಂಗಣ ನಿರ್ಮಿಸುವ ಕಾರ್ಯಕ್ಕೆ ಬಹುತೇಕ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಈ ಸಭಾಂಗಣಕ್ಕೆ ಪೀಠೋಪಕರಣಗಳನ್ನು ಒದಗಿಸಲೂ ಹಣ ಬಿಡುಗಡೆ ಆಗಿದೆ. ಸಭಾಂಗಣ ಇನ್ನೂ ಕೆಲವು ತಿಂಗಳು ಕಾರ್ಯನಿರ್ವಹಿಸುವ ಲಕ್ಷಣಗಳಿಲ್ಲ.

ಕೆ.ಆರ್‌. ಮಾರುಕಟ್ಟೆಯ ಆರ್ಥಿಕ ಕೇಂದ್ರದ ಮರುಅಭಿವೃದ್ಧಿ ಅವುಗಳ ಗಾಜುಗಳನ್ನು ಬದಲಾಯಿಸಿರುವುದಕ್ಕಷ್ಟೇ ಸೀಮಿತವಾಗಿದೆ. ಎಲೆಕ್ಟ್ರಿಕಲ್‌ ಕಾಮಗಾರಿ ನಡೆಯುತ್ತಲೇ ಇದೆ. ₹40 ಕೋಟಿಯ ಕಾಮಗಾರಿಗೆ ₹30 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದರೂ, ಅಲ್ಲಿ ನಿರ್ಮಾಣವಾಗುತ್ತಿರುವ ಸಬ್‌ವೇ, ಒಂದು ವರ್ಷದಿಂದಲೂ ಇದ್ದ ಸ್ಥಿತಿಯಲ್ಲೇ ಇದೆ. ಮಾಂಸ ಮಾರುಕಟ್ಟೆ ಕಾಮಗಾರಿ ಪ್ರಗತಿ ಆಮೆಗತಿಯಲ್ಲಿ ಸಾಗಿದೆ. ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳ ಕುಂಠಿತಕ್ಕೆ ಸ್ಥಳೀಯರ ಪ್ರತಿರೋಧವೂ ಕಾರಣ ಎನ್ನಲಾಗಿದೆ.

ಇನ್ನೂ, ಬಹುತೇಕ ಯೋಜನೆಯನ್ನು ಕೈಬಿಟ್ಟಿದ್ದ ಗಾಂಧಿಬಜಾರ್‌ನಲ್ಲಿನ ಬಹು ಅಂತಸ್ತಿನ ಕಾರು ನಿಲುಗಡೆ ಕಟ್ಟಡದ (ಎಂಎಲ್‌ಸಿಪಿ) ಕಾಮಗಾರಿಯನ್ನು ‘ಸ್ಮಾರ್ಟ್‌ ಸಿಟಿ’ ಇತ್ತೀಚೆಗಷ್ಟೇ ಆರಂಭಿಸಿದೆ. ‘ಫೌಂಡೇಷನ್‌’ ಹಾಕಲಾಗಿದ್ದು, ಪಿಲ್ಲರ್‌ಗಳಿಗೆ ಕಂಬಿಗಳನ್ನು ಇದೀಗ ಕಟ್ಟಲಾಗುತ್ತಿದೆ. ಈ ಕಾಮಗಾರಿ ಅತಿವೇಗದಲ್ಲಿ ನಡೆಸಿದರೂ ಮುಗಿಯಲು ವರ್ಷವಾದರೂ ಬೇಕು ಎಂದು ನಿರ್ಮಾಣಗಾರರು ಹೇಳಿದರು.

‘ಸ್ಮಾರ್ಟ್‌ ಸಿಟಿ’ಯಿಂದ ಗಾಂಧಿಬಜಾರ್‌ನಲ್ಲಿ ಆರು ಅಂತಸ್ತಿನ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾಮಗಾರಿ ನೆಲ ಅಂತಸ್ತಿನಲ್ಲಿದೆ

‘ಸ್ಮಾರ್ಟ್‌ ಸಿಟಿ’ಯಿಂದ ಗಾಂಧಿಬಜಾರ್‌ನಲ್ಲಿ ಆರು ಅಂತಸ್ತಿನ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾಮಗಾರಿ ನೆಲ ಅಂತಸ್ತಿನಲ್ಲಿದೆ

ಎಲ್ಲ ಕಾಮಗಾರಿ ಮುಗಿಯಲಿದೆ: ಸುಶೀಲಮ್ಮ

‘ಐದು ಯೋಜನೆಗಳು ಮಾತ್ರ ಬಾಕಿ ಉಳಿದಿದ್ದು ಇದರಲ್ಲಿ  ನಾಲ್ಕು ಯೋಜನೆಗಳನ್ನು ಇನ್ನೊಂದು ತಿಂಗಳಲ್ಲಿ ಮುಗಿಸಲಿದ್ದೇವೆ. ಕೆ.ಆರ್. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಎರಡೂ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅವೆನ್ಯೂ ರಸ್ತೆಯಲ್ಲಿ ಜಲಮಂಡಳಿಯ ಕಾಮಗಾರಿಯಿಂದ ನಮ್ಮ ಯೋಜನೆ ವಿಳಂಬವಾಗಿದೆ. ಇನ್ನೊಂದು ತಿಂಗಳಲ್ಲಿ ಅದೂ ಮುಗಿಯಲಿದೆ’ ಎಂದು ‘ಬೆಂಗಳೂರು ಸ್ಮಾರ್ಟ್‌ ಸಿಟಿ’ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಎನ್‌. ಸುಶೀಲಮ್ಮ ತಿಳಿಸಿದರು.

‘ಬಿಬಿಎಂಪಿಯಿಂದ ಸ್ಥಳ ಹಸ್ತಾಂತರ ಹಾಗೂ ನ್ಯಾಯಾಲಯದಲ್ಲಿ ಪ್ರಕರಣವಿದ್ದುದರಿಂದ ಗಾಂಧಿಬಜಾರ್‌ ಕಾರು ನಿಲುಗಡೆ ಕಟ್ಟಡ ಕಾಮಗಾರಿ ವಿಳಂಬವಾಗಿ ಪ್ರಾರಂಭವಾಯಿತು. ಇನ್ನಾರು ತಿಂಗಳಲ್ಲಿ ಅದನ್ನೂ ಮುಗಿಸುತ್ತೇವೆ. ‘ಬೆಂಗಳೂರು ಸ್ಮಾರ್ಟ್‌ ಸಿಟಿ’ ಯೋಜನೆಗೆ ಕೇಂದ್ರದಿಂದ ಎಲ್ಲ ಅನುದಾನವೂ ಬಿಡುಗಡೆ ಆಗಿದೆ. ಬಹು ಅಂತಸ್ತಿನ ಕಾರು ನಿಲುಗಡೆ ಕಟ್ಟಡ(ಎಂಎಲ್‌ಸಿಪಿ) ಮಾತ್ರ ವಿಳಂಬವಾಗುತ್ತದೆ ಎಂದು ಕೇಂದ್ರಕ್ಕೂ ಪತ್ರ ಬರೆಯಲಾಗಿದೆ ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT