ಬೆಂಗಳೂರು: ‘ಸ್ನೇಹದೀಪ ಅಂಗವಿಕಲರ ಸಂಸ್ಥೆ’ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾವೇಶದಲ್ಲಿ ಅಂಗವಿಕಲ ಮಕ್ಕಳ ಗಾಯನ ಹಾಗೂ ನೃತ್ಯ ಮನಸೆಳೆಯಿತು. ಗಾಯನಕ್ಕೆ ಪ್ರೇಕ್ಷಕರು ಮನಸೋತರು. ದಿನವಿಡೀ ಸಾಂಸ್ಕೃತಿಕ ಕಲರವ ಕೇಳಿಬಂತು.
ಮಲ್ಲೇಶ್ವರದ ಜಲಮಂಡಳಿಯ ರಜತಭವನದಲ್ಲಿ ನಡೆದ ಸಮಾವೇಶದಲ್ಲಿ ವಿವಿಧೆಡೆಯಿಂದ 400ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸಮಾವೇಶಕ್ಕೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ‘ಈ ರೀತಿಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇವರು ಅಂಗವಿಕಲ ಮಕ್ಕಳು ಅಲ್ಲ; ವಿಶೇಷಚೇತನರು. ಎಲ್ಲರಿಗೂ ವಿಶೇಷ ಶಕ್ತಿ ಇರುತ್ತದೆ. ಎಲ್ಲ ರಂಗದಲ್ಲೂ ಅಂಗವಿಕಲರಿಗೆ ಸ್ಥಾನ ಸಿಗಬೇಕು’ ಎಂದು ಸಲಹೆ ನೀಡಿದರು.
‘ಅಂಗವಿಕಲರು ಸ್ವಾವಲಂಬಿಯಾಗಿ ಬದುಕು ನಡೆಸಬೇಕಿದ್ದು, ಸರ್ಕಾರವು ಉತ್ತಮ ಯೋಜನೆ ಜಾರಿಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟರು.
‘ಸಮಾಜಮುಖಿಯಾಗಿ ಬದುಕು ನಡೆಸಲು ಸ್ನೇಹದೀಪ ಸಂಸ್ಥೆಯು ವೇದಿಕೆ ಕಲ್ಪಿಸಿಕೊಟ್ಟಿದೆ’ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಧರ್ಮದರ್ಶಿ ಡಾ.ಪಾಲ್ ಮುದ್ದಾ ಮಾತನಾಡಿ, ‘ಈ ವರ್ಷ ನಿರಂತರ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದೇವೆ. ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸುತ್ತಿದ್ದೇವೆ. ಶಮಾನೋತ್ಸವ ಸಮಾರಂಭವು ತುಂಬ ಖುಷಿ ನೀಡಿದೆ’ ಎಂದರು.