ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾದ ಜಲ ಜೀವನ್ ಮಿಷನ್ಗೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕರ್ನಾಟಕ ರಾಜ್ಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
‘ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಅನುಷ್ಠಾನ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಾದ್ಯಂತ ನಡೆಯುತ್ತಿದೆ. ಸರ್ಕಾರಗಳ ಹಣದೊಂದಿಗೆ ಜನರಿಂದಲೂ ಪ್ರತಿ ಗ್ರಾಮದಲ್ಲಿ ಸಮುದಾಯವಂತಿಗೆಯ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ‘ಹರ್ ಘರ್ ಜಲ್’ ಎಂದು ಹೇಳುತ್ತಾ ಪ್ರತಿಯೊಂದು ನಳಕ್ಕೂ ಮೀಟರ್ ಅಳವಡಿಸಲಾಗುತ್ತದೆ. ಇದರಿಂದ ನೀರಿಗೆ ದುಬಾರಿ ಬಿಲ್ ತೆರಬೇಕಾಗುತ್ತದೆ. ಕನಿಷ್ಠ ಮೂಲಭೂತ ಅವಶ್ಯಕತೆಯಾದ ನೀರಿಗೂ ಮೀಟರ್ ಅಳವಡಿಸಿ, ಹಣ ದೋಚುವ ಹುನ್ನಾರವನ್ನು ಸರ್ಕಾರ ಮರೆಮಾಚುತ್ತಿವೆ’ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಉಮಾ ಆರೋಪಿಸಿದ್ದಾರೆ.
‘ಈಗಾಗಲೇ ಖಾಸಗೀಕರಣ ನೀತಿಗಳಿಂದ ತತ್ತರಿಸುವ ಜನತೆ, ಶಿಕ್ಷಣ, ಆರೋಗ್ಯ, ಅಡುಗೆ ಅನಿಲ ಹಾಗೂ ಇತರ ಕನಿಷ್ಠ ಅವಶ್ಯಕತೆಗಳಿಗೆ ದುಬಾರಿ ಶುಲ್ಕ ಪಾವತಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಣ ವಸೂಲಿಗೆ ದಾರಿ ಮಾಡಿಕೊಡುವ ಜಲ ಜೀವನ್ ಮಿಷನ್ ಯೋಜನೆಯನ್ನು ಕೈಬಿಟ್ಟು, ಹಿಂದಿನಂತೆಯೇ ಜನರಿಗೆ ನೀರು ಸರಬರಾಜು ಮಾಡುವ ನೀತಿಯನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.