ಬೆಂಗಳೂರು: 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಎರಡೂ ಜಿಲ್ಲೆಗಳು ‘ಎ’ ದರ್ಜೆ ಪಡೆದಿದ್ದು, 24 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡೂ ಉತ್ತಮ ಫಲಿತಾಂಶ ಪಡೆದಿವೆ. ಬಹುಆಯ್ಕೆಯ ಪ್ರಶ್ನೆಗಳ ಮಾದರಿ ಉತ್ತಮವಾಗಿದ್ದು, ಭವಿಷ್ಯದಲ್ಲಿಯೂ ಇದೇ ವ್ಯವಸ್ಥೆ ಮುಂದುವರಿಸಬೇಕು ಎಂದು ಹಲವು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
625ಕ್ಕೆ 625 ಅಂಕ ಪಡೆದ ರಾಜಾಜಿನಗರ ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಿ. ಅಭಯಚಂದ್ರ, ‘ಈ ಬಾರಿಯ ಪ್ರಶ್ನೆಪತ್ರಿಕೆಯ ಸ್ವರೂಪ ತುಂಬಾ ಚೆನ್ನಾಗಿತ್ತು. ಎಲ್ಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಸಿಗುವಲ್ಲಿ, ಈ ಮಾದರಿಯ ಪ್ರಶ್ನೆಪತ್ರಿಕೆಯೂ ಕಾರಣ’ ಎಂದು ಹೇಳಿದರು.
‘ಉತ್ತಮ ಅಂಕಗಳು ಬರುತ್ತವೆ ಎಂಬ ನಿರೀಕ್ಷೆ ಇತ್ತು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಪರೀಕ್ಷೆ ನಡೆಸಲು ನಿರ್ಧರಿಸಿದ ಸರ್ಕಾರ ಮತ್ತು ಈ ಮಾದರಿಯ ಪ್ರಶ್ನೆಪತ್ರಿಕೆ ರೂಪಿಸಿದ ಪರೀಕ್ಷಾ ಮಂಡಳಿಗೆ ಧನ್ಯವಾದ ಹೇಳಲೇಬೇಕು’ ಎಂದು 625ಕ್ಕೆ 625 ಅಂಕಗಳನ್ನು ಪಡೆದ ಪೂರ್ಣಪ್ರಜ್ಞ ಪ್ರೌಢಶಾಲೆಯ ವಿದ್ಯಾರ್ಥಿನಿ ಎ. ಜ್ಯೋತಿಕಾ ಹೇಳಿದರು.
‘ಬಹುಅಂಕಗಳ ಮಾದರಿಯ ಪ್ರಶ್ನೆಪತ್ರಿಕೆ ತುಂಬಾ ಉಪಯುಕ್ತವಾಗಿತ್ತು. ಅಲ್ಲದೆ, ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಸುರಕ್ಷತೆಗೆ ತೆಗೆದುಕೊಂಡಿದ್ದ ಕ್ರಮಗಳು ನಮ್ಮಲ್ಲಿ ಧೈರ್ಯ ತುಂಬಿದವು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಈ ಅಂಶವೂ ನೆರವಾಯಿತು’ ಎಂದರು ಎಲ್ಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಗಳಿಸಿದ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಆರ್. ಅದಿತಿ.