ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮನೋಜ್ (19) ಎಂಬುವರು ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
‘ಮಂಡ್ಯದ ಮನೋಜ್, ನಗರದ ಕಾಲೇಜೊಂದರಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಇನ್ಸ್ಟಾಗ್ರಾಮ್ನಲ್ಲಿ ‘ಸಾರಿ’ ಪೋಸ್ಟ್ ಪ್ರಕಟಿಸಿದ್ದ ಅವರು, ಜ್ಞಾನಭಾರತಿ ಬಳಿಯ ಅಜ್ಜಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪೋಷಕರ ಜೊತೆ ನೆಲೆಸಿದ್ದ ಮನೋಜ್, ಸಮೀಪದಲ್ಲೇ ಇದ್ದ ಅಜ್ಜಿ ಮನೆಗೆ ಆಗಾಗ ಹೋಗಿ ಬರುತ್ತಿದ್ದರು. ಕುಟುಂಬ ಸಮೇತ ಚಿಕ್ಕಮಗಳೂರು ಪ್ರವಾಸಕ್ಕೆ ಹೋಗಲು ಯೋಚಿಸಿದ್ದ ಮನೋಜ್, ಬುಧವಾರ ರಾತ್ರಿ ಅಜ್ಜಿ ಮನೆಗೆ ಹೋಗಿ ತಂಗಿದ್ದರು.’
‘ಗುರುವಾರ ಬೆಳಿಗ್ಗೆ ಮನೋಜ್ ಮೊಬೈಲ್ಗೆ ತಾಯಿ ಕರೆ ಮಾಡಿದ್ದರು. ಯಾವುದೇ ಸ್ಪಂದನ ಸಿಕ್ಕಿರಲಿಲ್ಲ. ಅನುಮಾನಗೊಂಡ ಅವರು ಮನೆ ಬಳಿ ಹೋಗಿ ಕೊಠಡಿಯಲ್ಲಿ ನೋಡಿದಾಗ ಮೃತದೇಹ ಕಂಡಿತ್ತು’ ಎಂದೂ ಮೂಲಗಳು ತಿಳಿಸಿವೆ.
‘ಮನೋಜ್ ಕೆಲ ದಿನಗಳಿಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋವಿನ ಬರಹಗಳನ್ನು ಪ್ರಕಟಿಸುತ್ತಿದ್ದರು. ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಪೋಷಕರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿವೆ.