ಬೆಂಗಳೂರು: ‘ಈಡಿಗ ಸಮುದಾಯದ 26 ಉಪ ಪಂಗಡಗಳನ್ನೂ ಒಗ್ಗೂಡಿಸಬೇಕಿದೆ. ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸದಸ್ಯರು ಹಾಗೂ ಸಮುದಾಯದ ಯುವಕರು ಈ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ವಿಚಾರ ವೇದಿಕೆಯ ಬೆಂಗಳೂರು ಘಟಕಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
‘ರಾಜ್ಯದಲ್ಲಿ ಮೀಸಲಾತಿಯ ಕೂಗು ಕೇಳಿ ಬರುತ್ತಿದೆ. ಪ್ರಬಲ ಸಮುದಾಯಗಳು 2ಎ ಮೀಸಲಾತಿಗಾಗಿ ಪ್ರಯತ್ನಿಸುತ್ತಿವೆ. ಈಗಲೂ ಅನೇಕ ಸೌಕರ್ಯಗಳಿಂದ ವಂಚಿತವಾಗಿರುವ ನಮಗೆ ಇದರಿಂದ ಅಪಾಯ ಹೆಚ್ಚು. ಹೀಗಾಗಿ ಸಮುದಾಯದ ಎಲ್ಲರೂ ತಮ್ಮ ಹಕ್ಕು ಹಾಗೂ ಸೌಕರ್ಯಗಳಿಗಾಗಿ ಒಟ್ಟಾಗಿ ಹೋರಾಡಬೇಕು’ ಎಂದರು.
ಸಹಾಯಕ ಪೊಲೀಸ್ ಕಮಿಷನರ್ ರೀನಾ ಸುವರ್ಣ ‘ಈಡಿಗ ಸಮುದಾಯ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ. ಸಮುದಾಯ ಒಗ್ಗೂಡುವ ಅಗತ್ಯ ಈಗ ಹೆಚ್ಚಿದೆ. ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಸಮುದಾಯದ ನಾಯಕರು ಸಮಾಜದ ಹಿತ ಕಾಯಲು ಮುಂದಾಗಬೇಕು. ಇದಕ್ಕಾಗಿ ಪಕ್ಷ ಬೇಧ ಮರೆತು ಕೆಲಸ ಮಾಡಬೇಕು’ ಎಂದು ಹೇಳಿದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುಂಟರಹಳ್ಳಿ, ಖಜಾಂಚಿ ದಿನೇಶ್ ಮಳಲಗದ್ದೆ, ಸಂಘಟನಾ ಕಾರ್ಯದರ್ಶಿ ಗಣೇಶ್, ಭಾಸ್ಕರ್ ಪೂಜಾರಿ ಇದ್ದರು.