ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಾಜ್ (22) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದಾರೆ ಎನ್ನಲಾದ ಪತಿ ನಾಸಿರ್ ಹುಸೇನ್ ಪರಾರಿಯಾಗಿದ್ದಾರೆ.
‘ನಾಜ್ ಹಾಗೂ ನಾಸಿರ್ ಹುಸೇನ್, ಪರಸ್ಪರ ಪ್ರೀತಿಸಿ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.
‘ಭಾನುವಾರ ರಾತ್ರಿ ನಾಜ್ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಕೃತ್ಯದ ನಂತರ ಪತಿ ನಾಸಿರ್ ಪರಾರಿಯಾಗಿದ್ದಾನೆ. ನಾಜ್ ಸಂಬಂಧಿಕರು ನೀಡಿರುವ ದೂರು ಆಧರಿಸಿ ನಾಸಿರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಶೀಲ ಶಂಕಿಸಿ ಗಲಾಟೆ: ‘ಆರೋಪಿ ನಾಸಿರ್ಗೆ ತಂದೆ– ತಾಯಿ ಇಲ್ಲ. ನಾಜ್ ಅವರು ತಮ್ಮ ಪೋಷಕರನ್ನು ಒಪ್ಪಿಸಿ ಆರೋಪಿಯನ್ನು ಮದುವೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ನಾಜ್ ಅವರ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತಿ ಗಲಾಟೆ ಮಾಡಲಾರಂಭಿಸಿದ್ದ. ಈ ಬಗ್ಗೆ ಸಂಬಂಧಿಕರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
‘ನಾಜ್ ಅವರು ಗರ್ಭಿಣಿ ಎಂಬುದು ಇತ್ತೀಚೆಗೆ ಗೊತ್ತಾಗಿತ್ತು. ಅಷ್ಟಕ್ಕೆ ಕೋಪಗೊಂಡಿದ್ದ ಪತಿ, ‘ನೀನು ಅಕ್ರಮ ಸಂಬಂಧವಿಟ್ಟುಕೊಂಡಿದ್ದಿಯಾ? ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ. ಗರ್ಭಪಾತ ಮಾಡಿಸು’ ಎಂದು ಜಗಳ ತೆಗೆದಿದ್ದ. ಅದಕ್ಕೆ ನಾಜ್ ಒಪ್ಪಿರಲಿಲ್ಲ’ ಎಂದು ಹೇಳಿದರು.
ಕೊಲೆ ಬಳಿಕ ಸಹೋದರನಿಗೆ ಸಂದೇಶ: ‘ದಂಪತಿ ನಡುವೆ ಭಾನುವಾರ ರಾತ್ರಿಯೂ ಜಗಳ ಶುರುವಾಗಿತ್ತು. ಇದೇ ವೇಳೆಯೇ ಆರೋಪಿ, ಪತ್ನಿ ನಾಜ್ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘ಕೊಲೆ ನಂತರ ನಾಜ್ ಅವರ ಸಹೋದರನಿಗೆ ಸಂದೇಶ ಕಳುಹಿಸಿದ್ದ ನಾಸಿರ್, ಸ್ಥಳದಿಂದ ಪರಾರಿಯಾಗಿದ್ದಾನೆ. ಸಂದೇಶ ನೋಡಿ ಗಾಬರಿಗೊಂಡ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ಮೃತದೇಹ ಕಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಹೇಳಿದರು.
‘ನಾಜ್ ಗರ್ಭಿಣಿಯಾಗಿದ್ದರು ಎಂಬುದಕ್ಕೆ ಪುರಾವೆಯಾಗಿ ವೈದ್ಯಕೀಯ ವರದಿಯ ಚೀಟಿಯೊಂದು ಮನೆಯಲ್ಲಿ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿದರು.