ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಗಾಧರ‘ನಿಗೆ ಸೂರ್ಯಸ್ಪರ್ಶ: ಮುಗಿಲು ಮುಟ್ಟಿದ ಹರ್ಷ

Published 15 ಜನವರಿ 2024, 16:06 IST
Last Updated 15 ಜನವರಿ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಸೋಮವಾರ ಸೂರ್ಯನ ಕಿರಣಗಳು ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಭಕ್ತರಲ್ಲಿ ಹರ್ಷದ ಹೊನಲು ಹರಿಯಿತು. ಸೂರ್ಯರಶ್ಮಿ 3 ನಿಮಿಷ ಶಿವಲಿಂಗದ ಮೇಲೆ ಬೆಳಕು ಚೆಲ್ಲಿತು.

ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ದೇಗುಲದ ಬಲಭಾಗದ ಕಿಂಡಿಯಿಂದ ಸಂಜೆ 5.20ರ ವೇಳೆಗೆ ನೇಸರನ ಕಿರಣ ಪ್ರವೇಶಿಸಿತು. ಮೊದಲು ಗವಿಗಂಗಾಧರೇಶ್ವರ ದೇವರ ಪಾದ ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದುಹೋಗಿ ಇಡೀ ಶಿವಲಿಂಗವನ್ನು ಆವರಿಸಿತು. ಈ ಅವಧಿಯಲ್ಲಿ ದೇವರಿಗೆ ನಿರಂತರವಾಗಿ ಅಭಿಷೇಕ ನಡೆಸಲಾಯಿತು.

ಭಾಸ್ಕರನ ಎಳೆಕಿರಣಗಳು ಮರೆಯಾದ ನಂತರ ಮತ್ತೊಮ್ಮೆ ದೇವರಿಗೆ ಅಭಿಷೇಕ ಮಾಡಿ, ಪೂಜೆ ಸಲ್ಲಿಸಲಾಯಿತು. ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವಾಲಯದ ಹೊರಗಡೆ ವಿಶೇಷ ಎಲ್‌ಇಡಿ ಪರದೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಗಂಗಾಜಲವನ್ನು ಪ್ರೋಕ್ಷಣೆ ಮಾಡಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. 

ನಗರದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವಾಗ ಶಿವನಾಮ ಪಠಿಸಿದರು. ಬಳಿಕ ಸರತಿ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ಅವರೂ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ಸಂಕ್ರಾಂತಿ ದಿನವಾದ ಸೋಮವಾರ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಶಿವ ಲಿಂಗದ ದರ್ಶನ ಪಡೆಯಲು ಭಕ್ತರು ಸರತಿಯಲ್ಲಿ ನಿಂತಿರುವುದು. ಪ್ರಜಾವಾಣಿ ಚಿತ್ರ/
ಸಂಕ್ರಾಂತಿ ದಿನವಾದ ಸೋಮವಾರ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಶಿವ ಲಿಂಗದ ದರ್ಶನ ಪಡೆಯಲು ಭಕ್ತರು ಸರತಿಯಲ್ಲಿ ನಿಂತಿರುವುದು. ಪ್ರಜಾವಾಣಿ ಚಿತ್ರ/

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಮುಂಜಾನೆಯೇ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಂದಿತ್ತು. ಜನರು ಸರದಿ ಸಾಲಿನಲ್ಲಿ ನಿಂತು, ಗಂಗಾಧರೇಶ್ವರನ ದರ್ಶನ ಪಡೆದರು. ಮುಂಜಾನೆ 5ರಿಂದ ಮಧ್ಯಾಹ್ಮ 12ರವರೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT