ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿ ಟ್ಯಾಂಕರ್ ಮೈ ಮೇಲೆ ಹರಿದು ಬಾಲಕನೊಬ್ಬ ಮೃತಪಟ್ಟಿದ್ದ ಘಟನೆಯಿಂದ ಎಚ್ಚೆತ್ತ ಸಂಚಾರ ಪೊಲೀಸರು, ನಗರದಲ್ಲಿ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿದರು.
ನಗರದ ವಿವಿಧ ರಸ್ತೆಗಳಲ್ಲಿ ಟ್ಯಾಂಕರ್ಗಳನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿದ್ದವರಿಗೆ ದಂಡ ವಿಧಿಸಿದರು.
‘ನೀರಿನ ಟ್ಯಾಂಕರ್ ಚಾಲಕರು, ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ, ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಕೆ.ಎಂ. ಶಾಂತರಾಜು ಹೇಳಿದರು.
‘ಕುಡಿದು ವಾಹನ ಚಾಲನೆ, ನಿರ್ಬಂಧಿತ ರಸ್ತೆಯಲ್ಲಿ ಸಂಚಾರ, ಸಿಗ್ನಲ್ ಜಂಪ್, ಸಮವಸ್ತ್ರ ಧರಿಸದ ಸೇರಿದಂತೆ ವಿವಿಧ ಉಲ್ಲಂಘನೆಗಾಗಿ 258 ಟ್ಯಾಂಕರ್ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.