ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ವಿರುದ್ಧ ಎಲ್ಲೆಡೆ ಅಸಮಾಧಾನ: ಮೇಧಾ ಪಾಟ್ಕರ್

ಪಿ.ಜಿ.ಆರ್. ಸಿಂಧ್ಯಾ ಅವರಿಗೆ ‘ಜೆ.ಪಿ.‍ಪ್ರಶಸ್ತಿ’ ಪ್ರದಾನ
Last Updated 12 ಅಕ್ಟೋಬರ್ 2022, 1:42 IST
ಅಕ್ಷರ ಗಾತ್ರ

ಬೆಂಗಳೂರು: ‘ಆಡಳಿತ ನಡೆಸುತ್ತಿರುವ ಸರ್ಕಾರಗಳು ಬಡತನ ನಿರ್ಮೂಲನೆ ಯತ್ತ ಚಿತ್ತ ಹರಿಸದೆ ಮಂದಿರ, ಮಸೀದಿಯತ್ತ ಓಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯ ಬಗ್ಗೆ ಎಲ್ಲೆಡೆ ಅಸಮಾಧಾನವಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದರು.

ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಜಯ
ಪ್ರಕಾಶ್ ನಾರಾಯಣ್‌–121 ಸಮಾರಂಭ
ದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ‘ಜೆ.ಪಿ.‍ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಬಡತನ ನಿರ್ಮೂಲನೆಗೆ ‍ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ. ಕೋವಿಡ್‌ ನಂತರವಂತೂ ಈ ಅಂತರ ಹೆಚ್ಚಾಗಿದೆ. ಮತ್ತೊಂದು ಕಡೆ ಭಾರತದ ಶ್ರೀಮಂತರು ವಿಶ್ವದ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವಿದೆ. ಜಮೀನು, ಅರಣ್ಯ, ನದಿ ಪಾತ್ರಗಳನ್ನೂ ಅವರಿಗೆ ಧಾರೆ ಎರೆಯಲಾಗುತ್ತಿದೆ. ಅದಕ್ಕಾಗಿ ಪ್ರಜಾಪ್ರಭುತ್ವವನ್ನೇ ಬಲಿ
ಕೊಡಲಾಗುತ್ತಿದೆ’ ಎಂದು ಕಳವಳ
ವ್ಯಕ್ತಪಡಿಸಿದರು.

‘ವ್ಯವಸ್ಥೆ ಪ್ರಶ್ನಿಸುವ ನಿಷ್ಠೂರತೆ, ಸವಾಲುಗಳನ್ನು ಹಾಕುವ ದೃಢತೆಯನ್ನು ಸಾಮಾನ್ಯ ಜನರೂ ಬೆಳೆಸಿಕೊಳ್ಳಬೇಕು.
ಮತದಾನದ ಹಕ್ಕು ಚಲಾಯಿಸುವುದಷ್ಟೇ ಜನರು ಸೀಮಿತವಾಗಬಾರದು,
ಅಧಿಕಾರಕ್ಕೇರಿದ ಸರ್ಕಾರ, ನಮ್ಮ ಸುತ್ತಲ ಸಮಾಜ ಹೇಗೆ ಸಾಗುತ್ತಿದೆ ಎನ್ನುವ ಅರಿವು ಹೊಂದಬೇಕು. ಜನರು ಪ್ರಶ್ನಿಸುವ, ಹೋರಾಟ ಮಾಡುವ ಮನೋಭಾವ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ಬಳ್ಳಾರಿಯಲ್ಲಿ 25 ಸಾವಿರ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿ
ದ್ದಾರೆ. ಸರ್ಕಾರ ಅದನ್ನು ಹಳೆಯ ಸಮಸ್ಯೆ ಎನ್ನುತ್ತದೆ. ರಾಮಮಂದಿರ ವಿವಾದ ಹೊಸ ಸಮಸ್ಯೆಯೇ? ಮಂದಿರ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುವ ಸರ್ಕಾರಗಳಿಗೆ ಕೂಲಿ ಕಾರ್ಮಿಕರ ಸಮಸ್ಯೆಗಳು ಗೌಣವಾಗಿವೆಯೇ’ ಎಂದು ಪ್ರಶ್ನಿಸಿದರು.

‘ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯ ಘೋಷಣೆಗಳು ಹಿಂದೆ ನಾವೆಲ್ಲ ಬಳಸಿದವುಗಳು. ಅವರ ಯಾತ್ರೆ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿದೆ. ಜನರು ಅಂತಹ ಸಣ್ಣಸಣ್ಣ ಯಾತ್ರೆಗಳನ್ನು ತಮ್ಮ ಮಟ್ಟದಲ್ಲೇ ನಡೆಸಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್, ‘ಜಯಪ್ರಕಾಶ್ ನಾರಾಯಣ್‌ ಅವರದು ನಿಸ್ವಾರ್ಥ ಚಳವಳಿ. ಅವರ ಹೋರಾಟದ ಪ್ರವಾಹದಲ್ಲಿ ಈಜಿದ ಎಲ್ಲರೂ
ರಾಜಕಾರಣದಲ್ಲಿ ಬೆಳೆದರು. ಆದರೆ, ಜೆಪಿ ಮಾತ್ರ ಎಂದೂ ಅಧಿಕಾರ ಬಯಸಲಿಲ್ಲ’ ಎಂದು ಸ್ಮರಿಸಿದರು.

ಮಾಜಿ ಶಾಸಕ ಬಿ.ಆರ್.ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಸಾಮಾಜಿಕ ಹೋರಾಟಗಾರ ಎಚ್‌.ಕೆ.ವಿವೇಕಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT