ಬೆಂಗಳೂರು: ರಾಮಯ್ಯ ಕಾನೂನು ಕಾಲೇಜು ಮತ್ತು ಜಸ್ಟೀಸ್ ಇ.ಎಸ್.ವೆಂಕಟರಾಮಯ್ಯ ಗ್ಲೋಬಲ್ ಲೀಗಲ್ ಸ್ಕಿಲ್ಸ್ ಅಕಾಡೆಮಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘3 ಹೊಸ ಕ್ರಿಮಿನಲ್ ಕಾನೂನುಗಳ’ ಕುರಿತು ಪೊಲೀಸರಿಗೆ ತರಬೇತಿ ನೀಡಲಾಯಿತು.
ಪ್ರಸ್ತುತ ಸಂದರ್ಭಗಳಿಗೆ ತಕ್ಕಂತೆ ಸರ್ವರಿಗೂ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮೂರು ಹೊಸ ಕಾನೂನು ರೂಪಿಸಿದ್ದು, ಇವುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಎಂಬ ಹಿನ್ನೆಲೆಯಲ್ಲಿ ತರಬೇತಿ ಆಯೋಜಿಸಲಾಗಿತ್ತು.
ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ 550ಕ್ಕೂ ಹೆಚ್ಚು ಪೊಲೀಸರಿಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಈಶ್ವರ್ ಎಸ್.ಅಂಟಿನ್, ಎಸ್ಬಿಎನ್ ಪ್ರಕಾಶ್, ಡಿ.ಆರ್. ವೆಂಕಟ ಸುದರ್ಶನ್ ಅವರು ಮೂರು ಹೊಸ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.
‘ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಜಾರಿಯಾಗುತ್ತಿದೆ. ಜೊತೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯೂ ಜಾರಿಗೆ ಬರಲಿದೆ’ ಎಂದು ತಿಳಿಸಿದರು.
ಗೋಕುಲ ಎಜುಕೇಷನ್ ಫೌಂಡೇಷನ್ನ ಮುಖ್ಯಾಧಿಕಾರಿ ಬಿ.ಎಸ್.ರಾಮಪ್ರಸಾದ್, ‘ರಾಮಯ್ಯ ಕಾನೂನು ಕಾಲೇಜಿನಲ್ಲಿ ಹೊಸ ಕಾನೂನುಗಳ ಬಗ್ಗೆ ಪ್ರತಿಯೊಬ್ಬರಿಗೆ ಅನುಕೂಲವಾಗುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.
ರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಉಮಾ ಮಹೇಶ ಸತ್ಯನಾರಾಯಣ, ಶೈಕ್ಷಣಿಕ ವಿಭಾಗದ ಬೋಧಕ ಸಿಬ್ಬಂದಿಯ ಸಂಯೋಜಕ ಸಿ. ಪ್ರಣಾಮ್ ಭಾಗವಹಿಸಿದ್ದರು.