ಬೆಂಗಳೂರು: ಭಾರತದ ಚೊಚ್ಚಲ ಗಗನಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳಿಗೆ ಬೀದರ್ನಲ್ಲಿರುವ ಭಾರತೀಯ ವಾಯುಪಡೆಯ ವಾಯು ನೆಲೆಯಲ್ಲಿ ಪ್ರಾಥಮಿಕ ಹಂತದ ತರಬೇತಿ ಆರಂಭಗೊಳ್ಳಲಿದೆ.
ಈ ವಾರವೇ ಯುದ್ಧ ವಿಮಾನಗಳಲ್ಲಿ ಆರಂಭಿಕ ತರಬೇತಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಕೋವಿಡ್ ಕಾರಣದಿಂದಾಗಿ ಗಗನ ಯಾನ ಯೋಜನೆಯನ್ನು ಮುಂದೂಡ ಲಾಗಿತ್ತು. ಇದರಿಂದಾಗಿ ತರಬೇತಿಯೂ ತಡವಾಗಿತ್ತು. ತರಬೇತಿ ಆರಂಭವಾಗುತ್ತಿರುವ ವಿಚಾರವನ್ನು ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಖಚಿತಪಡಿಸಿದ್ದಾರೆ.
ನಾಲ್ವರು ಪೈಲಟ್ಗಳು ಕಳೆದ ವಾರವೇ ಬೀದರ್ಗೆ ಬಂದು ಬೀಡು ಬಿಟ್ಟಿದ್ದಾರೆ. ಈ ವಾರ ತರಬೇತಿ ಮುಗಿದ ತಕ್ಷಣವೇ ಅವರಿಗೆ ಗಗನಯಾನಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ತರಗತಿಗಳೂ ಆರಂಭವಾಗುತ್ತದೆ. ಉನ್ನತ ಮಟ್ಟದ ತರಬೇತಿಗೆ ಇವರನ್ನು ರಷ್ಯಾಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸುವುದಕ್ಕೆ ಮುನ್ನ ಎರಡು ಮಾನವ ರಹಿತ ರಾಕೆಟ್ಗಳನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಿ ಅದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಿ, ನೌಕೆಯ ಕ್ಷಮತೆಯನ್ನು ನಿರ್ಧರಿಸಬೇಕಾಗಿದೆ.