ಬೊಮ್ಮನಹಳ್ಳಿ: ‘ತುಳುವರ ಸಂಸ್ಕೃತಿ, ಭಾಷೆ, ಆಹಾರ, ಆಚಾರ-ವಿಚಾರ ಬಹಳ ವಿಶಿಷ್ಟತೆಯಿಂದ ಕೂಡಿದ್ದು, ಈ ವೈವಿಧ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಬೆಂಗಳೂರು ಬಿಲ್ಲವರ ಸಂಘದ ಅಧ್ಯಕ್ಷ ವೇದಕುಮಾರ್ ಹೇಳಿದರು.
ತುಳುವೆರೆಂಕುಲು ಸಂಸ್ಥೆ ವಿಜಯ ಬ್ಯಾಂಕ್ ಲೇಔಟ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಟಿಡೊಂಜಿ ಕೂಟ ಉದ್ಘಾಟಿಸಿ ಮಾತನಾಡಿದರು.
‘ತುಳುನಾಡಿನಲ್ಲಷ್ಟೇ ಭೂತಾ ರಾಧನೆ ಹಾಗೂ ನಾಗಾರಾಧನೆ, ಮದಿಪು ಮುಂತಾದ ಆಚರಣೆಗಳನ್ನು ಕಾಣಬಹುದು. ನಾವು ಬದುಕಿಗಾಗಿ ಎಲ್ಲೇ ಹೋಗಿ ನೆಲೆಸಿದರೂ ನಮ್ಮ ಸಂಸ್ಕೃತಿಯನ್ನು ಬಿಡಬಾರದು. ಟಿ.ವಿ, ಮೊಬೈಲ್ಗಳ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಇವೆಲ್ಲವೂ ನಶಿಸುವ ಅಪಾಯವಿದ್ದು, ತುಳು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಲ್ಲಿ ತಾಯಂದಿರ ಪಾತ್ರ ದೊಡ್ಡದು’ ಎಂದರು.
ಎ.ಜೆ.ಭಂಡಾರಿ, ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ಕಾನೂನು ಸಲಹೆಗಾರ್ತಿ ಶಕುಂತಲಾ ಶೆಟ್ಟಿ ಇದ್ದರು.
ಕರಾವಳಿಯ ಗ್ರಾಮೀಣ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಕಂಬಳ, ತೆಂಗಿನ ಕಾಯಿ ಕಟ್ಟುವುದು, ತಪ್ಪಂಗಾಯಿ ಸ್ಪರ್ಧೆಗಳು ಸೇರಿದಂತೆ ಹಾಡುಗಾರಿಕೆ, ಮಹಿಳೆಯರಿಗಾಗಿ ರಂಗೋಲಿ, ಮಕ್ಕಳಿಗಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಜನರು ಭಾಗವಹಿಸಿದ್ದರು.