ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಸೇವೆ ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಮೆಟ್ರೊ ರೈಲು ನಿಗಮವು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು (ಎಸ್ಒಪಿ) ಗುರುವಾರ ಪ್ರಕಟಿಸಿದೆ.
ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಟೋಕನ್ ಮಾರಾಟವನ್ನು ನಿಷೇಧಿಸಲಾಗಿದ್ದು, ಸ್ಮಾರ್ಟ್ಕಾರ್ಡ್ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಸ್ಮಾರ್ಟ್ಕಾರ್ಡ್ ರಿಚಾರ್ಜ್ ಮಾಡಿಸಿದ ಮೇಲೆ ಅದನ್ನು ಬಳಸಲು ಮೊದಲು 60 ದಿನಗಳವರೆಗೆ ಸಮಯವಿತ್ತು. ಈಗ, ಇದನ್ನು 7 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅಂದರೆ, ರಿಚಾರ್ಜ್ ಮಾಡಿಸಿದ ಏಳು ದಿನದೊಳಗೆ ಆ ಕಾರ್ಡ್ ಮೂಲಕ ಮೊದಲು ಪ್ರಯಾಣ ಮಾಡಬೇಕು. ನಿಗಮವು ಸೆ.7ರಿಂದ ಮೊಬೈಲ್ ಆ್ಯಪ್ ಬಳಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎಲ್ಲ ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್ಕೋಡ್ ಅಥವಾ ಪೇಟಿಎಂ ಮೂಲಕ, ನಿಲ್ದಾಣದಲ್ಲಿ ನಗದುರಹಿತ ಪಾವತಿ ಮಾಡಿ ಸ್ಮಾರ್ಟ್ಕಾರ್ಡ್ ಖರೀದಿ ಅಥವಾ ರಿಚಾರ್ಜ್ ಮಾಡಬಹುದು.
ಇದಲ್ಲದೆ,ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಒಂದು ಗಂಟೆ ಮೊದಲು ಸ್ಮಾರ್ಟ್ಕಾರ್ಡ್ ರಿಚಾರ್ಜ್ ಮಾಡಿಸಿಕೊಳ್ಳಬೇಕು. ಇದಕ್ಕೆ, ನಮ್ಮ ಮೆಟ್ರೊ ಮೊಬೈಲ್ ಅಪ್ಲಿಕೇಷನ್ ಅಥವಾ ಬಿಎಂಆರ್ಸಿಎಲ್ ವೆಬ್ಸೈಟ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬೇಕು.
ಮೊದಲಿನಂತೆ, ಪ್ರವೇಶ ಅಥವಾ ನಿರ್ಗಮನ ಗೇಟ್ಗಳ ಕಾರ್ಡ್ ರೀಡರ್ ಮೇಲೆ ಸ್ಮಾರ್ಟ್ಕಾರ್ಡ್ ಇಡುವ ಬದಲಾಗಿ, 3 ಸೆ.ಮೀ. ದೂರದಿಂದಲೇ ಪ್ರಸ್ತುತಪಡಿಸಬೇಕು ಎಂದು ನಿಗಮ ಹೇಳಿದೆ.
ಸೆ.7ರಿಂದ ನೇರಳೆ ಮಾರ್ಗದಲ್ಲಿ, 9ರಿಂದ ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಸೆ.11ರಿಂದ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಎರಡೂ ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ.
ಕಂಟೈನ್ಮೆಂಟ್ ವಲಯದಲ್ಲಿ ಪ್ರವೇಶವಿಲ್ಲ
ಯಾವುದೇ ನಿಲ್ದಾಣವು ಕಂಟೈನ್ಮೆಂಟ್ ವಲಯದ ವ್ಯಾಪ್ತಿಗೆ ಬಂದರೆ, ಅಂತಹ ನಿಲ್ದಾಣದಲ್ಲಿ ಪ್ರವೇಶ ಅಥವಾ ನಿರ್ಗಮನ ದ್ವಾರ ತೆರೆಯಲಾಗುವುದಿಲ್ಲ. ಈ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ. ಪ್ರಯಾಣಿಕರು ಸಮೀಪದ ನಿಲ್ದಾಣವನ್ನು ಹತ್ತಲು ಮತ್ತು ಇಳಿಯಲು ಬಳಸಿಕೊಳ್ಳಬಹುದು ಎಂದು ಎಸ್ಒಪಿಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.