ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಾ.12ಕ್ಕೆ ವಂದೇ ಭಾರತ್‌ ಸೇರಿ ವಿವಿಧ ಯೋಜನೆಗಳು ಲೋಕಾರ್ಪಣೆ

Published 10 ಮಾರ್ಚ್ 2024, 15:39 IST
Last Updated 10 ಮಾರ್ಚ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು–ಚೆನ್ನೈ ವಂದೇ ಭಾರತ್‌, ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು, ಪ್ರಧಾನಮಂತ್ರಿ ಜನೌಷಧ ಕೇಂದ್ರ ಸಹಿತ ವಿವಿಧ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 12ರಂದು ವರ್ಚುವಲ್‌ ಮೂಲಕ ಉದ್ಘಾಟಿಸಲಿದ್ದಾರೆ.

ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಅದರಲ್ಲಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಯೋಜನೆಗಳು ಒಳಗೊಂಡಿವೆ ಎಂದು ವಿಭಾಗ ರೈಲ್ವೆ ವ್ಯವಸ್ಥಾಪಕ ಯೋಗೇಶ್‌ ಮೋಹನ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಕುಶಲಕರ್ಮಿಗಳು, ಕುಂಬಾರರು, ನೇಕಾರರು, ಕೈಮಗ್ಗ ನೇಕಾರರು, ಕುಶಲಕರ್ಮಿಗಳು, ಬುಡಕಟ್ಟು ಜನಾಂಗದವರಿಗೆ  ವರ್ಧಿತ ಜೀವನೋಪಾಯ ಮತ್ತು ಕೌಶಲ  ಅಭಿವೃದ್ಧಿ ಅವಕಾಶಗಳನ್ನು ಒದಗಿಸಲು ಬಜೆಟ್‌ನಲ್ಲಿ ಒಂದು ದೇಶ, ಒಂದು ಉತ್ಪನ್ನ ಯೋಜನೆ ಘೋಷಿಸಲಾಗಿತ್ತು. ಅದರಂತೆ ಬೆಂಗಳೂರು ವಿಭಾಗದ 40 ರೈಲು ನಿಲ್ದಾಣಗಳಲ್ಲಿ ಮಳಿಗೆಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದಕ್ಕಾಗಿ ಸರ್ ಎಂ.ವಿ. ಟರ್ಮಿನಲ್‌ ಮತ್ತು ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.

ರೈಲು ಸಂಚಾರವನ್ನು ವೇಗಗೊಳಿಸಲು ದೊಡ್ಡಬಳ್ಳಾಪುರದ ಒಡ್ಡರಹಳ್ಳಿಯಲ್ಲಿ ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಆರಂಭಗೊಳ್ಳಲಿದೆ. ಪೆನುಕೊಂಡದಲ್ಲಿರುವ ಗೂಡ್ಸ್‌ ಶೆಡ್‌ ಅನ್ನು ಪುನರ್‌ ಅಭಿವೃದ್ಧಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಈಗ ನಾಲ್ಕು ವಂದೇ ಭಾರತ್‌ ರೈಲುಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಚೆನ್ನೈ–ಮೈಸೂರು ವಂದೇ ಭಾರತ್‌ ರೈಲಿನಲ್ಲಿ ಶೇ 85ಕ್ಕೂ ಅಧಿಕ ಆಸನಗಳು ಭರ್ತಿಯಾಗಿ ಸಂಚರಿಸುತ್ತಿವೆ. ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲಿಗೂ ಇದೇ ಸಂದರ್ಭದಲ್ಲಿ ಚಾಲನೆ ದೊರಕಲಿದೆ ಎಂದು ತಿಳಿಸಿದರು.

ಥಣಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್‌ ರೈಲುಗಳ ಕಾರ್ಯಾಗಾರ ಮತ್ತು ಡಿಪೊವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರಧಾನಿ ಅವರು ಅಂದೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ತ್ರಿನೇತ್ರ ಕೆ.ಆರ್‌., ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪರೀಕ್ಷಿತ್‌ ಮೋಹನ್‌ ಪೂರಿಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT