ಬೆಂಗಳೂರು: ‘ಮುಂದಿನ ವಿಧಾನಸಭೆ ಚುನಾವಣೆ ಮುಕ್ತ, ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಮತದಾರರ ದತ್ತಾಂಶ ಕಳವು ಪ್ರಕರಣದ ಸರಿಯಾದ ತನಿಖೆ ಆಗಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಚುನಾವಣಾ ಆಯೋಗದವರು ಈಗ ಪ್ರಕಟಿಸಿರುವ ಮತದಾರ ಪಟ್ಟಿಯನ್ನು ತಡೆಹಿಡಿದು ಪರಿಷ್ಕರಿಸಬೇಕು’ ಎಂದು ಒತ್ತಾಯಿಸಿದರು.
‘ಮತದಾರರ ದತ್ತಾಂಶ ಕಳವು ಪ್ರಕರಣದ ಬಗ್ಗೆ ಚುನಾವಣಾ ಆಯೋ ಗಕ್ಕೆ ನಾವು ದೂರು ಕೊಟ್ಟಿದ್ದೇವೆಂದು ಬಿಜೆಪಿಯವರೂ ದೂರು ಕೊಟ್ಟಿದ್ದಾರೆ. ಅದಕ್ಕೆ ಏನಾ ದರೂ ಅರ್ಥ ಇದೆಯೇ. ಅವರು ಹೀಗೆ ಮಾಡಿದರೆ ಮುಕ್ತ ಚುನಾವಣೆ ಬಗ್ಗೆ ಆತಂಕ ಉಂಟಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಈ ರೀತಿ ಮಾಡುವುದನ್ನು ನೋಡಿದರೆ ಮುಕ್ತ ಚುನಾವಣೆ ನಡೆಯಲಿದೆಯೆ ಅನಿಸುತ್ತದೆಯೇ? ಅಧಿಕಾರದಲ್ಲಿ ಇರುವವರು ಯಾರು? ಮಾತೆತ್ತಿದರೆ ನಿಮ್ಮ ಅವಧಿಯಲ್ಲಿ ಆಗಿರಲಿಲ್ಲವೇ ಎಂದು ಹೇಳುತ್ತಾರೆ. ಪ್ರಕರಣದ ತೀವ್ರತೆ ಗಂಭೀರವಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಘುವಾಗಿ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.