ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಹಾನಿಕರ: ಎಂಪ್ರಿ ವರದಿ

ಮಿತಿಮೀರಿದ ಭಾರಿ ಲೋಹಗಳ ಪ್ರಮಾಣ; ಮಾನವನ ದೇಹಕ್ಕೆ ವಿಷಕಾರಿ ಅಂಶ
Published 26 ಅಕ್ಟೋಬರ್ 2023, 16:31 IST
Last Updated 26 ಅಕ್ಟೋಬರ್ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ಕೊಳಚೆ ನೀರು ಬಳಸಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಭಾರ ಲೋಹದ ಸಾಂದ್ರತೆ ಹೆಚ್ಚಾಗಿದ್ದು, ಇಂಥ ತರಕಾರಿ ತಿನ್ನುವುದರಿಂದ ಮಾನವನ ದೇಹಕ್ಕೆ ವಿಷಕಾರಿ ಅಂಶ ಸೇರ್ಪಡೆಯಾಗುವ ಅಪಾಯವನ್ನು ಹೆಚ್ಚಿಸಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ‍್ರಿ) ಅಧ್ಯಯನ ತಿಳಿಸಿದೆ.

ನಗರದ ವಿವಿಧ ಭಾಗಗಳಲ್ಲಿರುವ ಮಾರುಕಟ್ಟೆ, ಸೂಪರ್‌ ಮಾರುಕಟ್ಟೆ ಮಳಿಗೆಗಳು, ಹಾಪ್‌ಕಾಮ್ಸ್‌, ಸಾವಯವ ಮಳಿಗೆಗಳಿಂದ 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಿ ಎಂಪ್ರಿ ಅಧ್ಯಯನ ನಡೆಸಿದೆ. ಇದರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹಾನಿಕರವಲ್ಲವೆಂದು ನಿಗದಿಪಡಿಸಿರುವ(ಪರ್ಮಿಸಿಬಲ್‌) ಮಿತಿಗಳಿಗಿಂತ ಹೆಚ್ಚಿನ ಭಾರ ಲೋಹ ತರಕಾರಿಗಳಲ್ಲಿ ಕಂಡು ಬಂದಿದೆ.

‘ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಭಾರ ಲೋಹಗಳ ಸಾಂದ್ರತೆ ಅಧ್ಯಯನ’ ಎಂಬ ವರದಿಯನ್ನು ಎಂಪ್ರಿ 2022ರ ನವೆಂಬರ್‌ನಲ್ಲಿ ಪ್ರಕಟಿಸಿದೆ. ಡಾ. ಎನ್‌. ಹೇಮಾ, ಪಿ.ಬಿ. ಐಶ್ವರ್ಯ, ಡಿ.ಆರ್. ದಿವ್ಯಾ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು.

ಬದನೆಕಾಯಿ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಬೀನ್ಸ್‌, ಕ್ಯಾರಟ್‌, ಹಸಿ ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಪಾಲಕ್‌ ಮತ್ತು  ಕೊತ್ತಂಬರಿ ಸೊಪ್ಪುಗಳನ್ನು ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿದೆ. ನುವಾವ್‌– ಅಲ್ಟ್ರಾ ಮೈಕ್ರೊವೇವ್‌ ಡೈಜೆಷನ್ ಎಕ್ಸ್‌ಟ್ರಾಕ್ಷನ್ ಸಿಸ್ಟಮ್‌ನಲ್ಲಿ ಪೂರ್ವ–ಚಾಲಿತ ಪ್ರೋಗ್ರಾಂ ಮೂಲಕ ಈ ತರಕಾರಿಗಳಲ್ಲಿ ಭಾರ ಲೋಹಗಳಿರುವುದನ್ನು ಪತ್ತೆಹಚ್ಚಲಾಗಿದೆ.

ಬೀನ್ಸ್‌ನಲ್ಲಿ ಕಬ್ಬಿಣದ ಅಂಶ ಹಾನಿಕಾರಕವಲ್ಲದ ಮಿತಿ ಪ್ರತಿ ಕೆ.ಜಿಗೆ 425.5 ಮಿ.ಗ್ರಾಂ. ಪ್ರಸಿದ್ಧ ಸಾವಯವ ಮಳಿಗೆಯೊಂದರಿಂದ ಖರೀದಿಸಿದ ಬೀನ್ಸ್‌ನಲ್ಲಿ ಈ ಪ್ರಮಾಣ ಪ್ರತಿ ಕೆ.ಜಿಗೆ 810.20 ಮಿ.ಗ್ರಾಂ ಇದೆ. ಕೊತ್ತಂಬರಿ ಸೊಪ್ಪಿನಲ್ಲಿ 945 ಮಿ.ಗ್ರಾಂ/ಕೆ.ಜಿ, ಪಾಲಕ್‌ ಸೊಪ್ಪಿನಲ್ಲಿ 554.58 ಮಿ.ಗ್ರಾಂ/ ಕೆ.ಜಿ ಯಷ್ಟಿದೆ. ಹಾಪ್‌ಕಾಮ್ಸ್‌ನ ಈರುಳ್ಳಿಯಲ್ಲಿ 592.18 ಮಿ.ಗ್ರಾಂ/ ಕೆ.ಜಿ ಕಬ್ಬಿಣದ ಅಂಶ ಕಂಡುಬಂದಿದೆ.

ಬಿಗ್‌ ಸೂಪರ್‌ ಮಾರುಕಟ್ಟೆಗಳು ಅಥವಾ ಸಣ್ಣ ಚಿಲ್ಲರೆ ಮಳಿಗೆಗಳಲ್ಲಿನ ತರಕಾರಿಗಳಲ್ಲಿ ಭಾರ ಲೋಹದ ಪ್ರಮಾಣ ಹಾನಿಕಾರಕವಲ್ಲದ ಮಿತಿಗಿಂತ ಹೆಚ್ಚಿದೆ. ಎಫ್‌ಎಒ ಕ್ಯಾಡ್ಮಿಯಂ ಮಿತಿಯನ್ನು 0.2 ಮಿ.ಗ್ರಾಂ/ ಕೆ.ಜಿ ಎಂದು ನಿಗದಿಪಡಿಸಿದೆ. ಆದರೆ, ಬಿಟಿಎಂ ಲೇಔಟ್‌ನ ಸೂಪರ್‌ ಮಾರುಕಟ್ಟೆಯಿಂದ ಸಂಗ್ರಹಿಸಿದ ಬದನೆಕಾಯಿಯಲ್ಲಿ ಕ್ಯಾಡ್ಮಿಯಂ 52.30 ಮಿ.ಗ್ರಾಂ/ಕೆ.ಜಿಯಷ್ಟಿದೆ. ಕೊತ್ತಂಬರಿ ಸೊಪ್ಪಿನಲ್ಲಿ 53.30 ಮಿ.ಗ್ರಾಂ/ ಕೆ.ಜಿ, ಪಾಲಕ್‌ನಲ್ಲಿ 53.50 ಮಿ.ಗ್ರಾಂ/ ಕೆ.ಜಿ, ಕ್ಯಾರಟ್‌ನಲ್ಲಿ 54.60 ಮಿ.ಗ್ರಾಂ/ ಕೆ.ಜಿ ಯಷ್ಟಿದೆ. ಈ ಲೋಹವು ಅತ್ಯಂತ ವಿಷಕಾರಿಯಾಗಿದ್ದು ಇದು ಯಕೃತ್ತು, ಶ್ವಾಸಕೋಶ ಹಾಗೂ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. 

ಸೀಸವನ್ನು ಅತ್ಯಂತ ವಿಷಕಾರಕ ಎಂದು ಹೇಳಲಾಗಿದ್ದು, ಸೊಪ್ಪು–ತರಕಾರಿಗಳಲ್ಲಿ ಈ ಲೋಹದ ಹಾನಿಕಾರಕವಲ್ಲದ ಮಿತಿ 0.3 ಮಿ.ಗ್ರಾಂ/ ಕೆ.ಜಿ ಆಗಿದೆ. ಆದರೆ ಸೂಪರ್‌ ಮಾರುಕಟ್ಟೆಗಳಲ್ಲಿ ಸಂಗ್ರಹಿಸಲಾದ ಹಲವು ತರಕಾರಿಗಳಲ್ಲಿ ಈ ಪ್ರಮಾಣ 12.20 ಮಿ.ಗ್ರಾಂ/ ಕೆ.ಜಿಯಷ್ಟಿದೆ.

ತರಕಾರಿಗಳಲ್ಲಿ ನಿಕ್ಕಲ್‌ ಲೋಹದ ಹಾನಿಕಾರಕವಲ್ಲದ ಮಿತಿ 67.9 ಮಿ.ಗ್ರಾಂ/ ಕೆ.ಜಿ ಆಗಿದ್ದು, ಹಸಿ ಮೆಣಸಿನಕಾಯಿ, ಕ್ಯಾರಟ್‌, ಆಲೂಗಡ್ಡೆ, ಟೊಮೆಟೊ ಮತ್ತು ಬೀನ್ಸ್‌ನಲ್ಲಿ ಈ ಲೋಹದ ಸಾಂದ್ರತೆ ಮಿತಿಮೀರಿದೆ.

ಈ ಭಾರ ಲೋಹಗಳ ಅಂಶ ತರಕಾರಿಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿದ್ದು, ಇಂಥ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಅತ್ಯಂತ ದುಷ್ಪರಿಣಾಮ ಬೀರಲಿದೆ. ಹೀಗಾಗಿ, ಕೊಳಚೆ ನೀರಿನಲ್ಲಿ ತರಕಾರಿ ಬೆಳೆಯುವುದನ್ನು ನಿರ್ಬಂಧಿಸಬೇಕು. ತರಕಾರಿ ಬೆಳೆಯುವಾಗ ಒಳಚರಂಡಿ ನೀರು ಮತ್ತು ಕೈಗಾರಿಕೆ ತ್ಯಾಜ್ಯ ನೀರನ್ನು ಬಳಸಬಾರದು. ನಗರದ ಹೊರವಲಯದಲ್ಲಿ ತರಕಾರಿ ಬೆಳೆಯುವುದನ್ನು ನಿಷೇಧಿಸಬೇಕು ಎಂದು ವರದಿ ಸಲಹೆ ನೀಡಿದೆ.

ನಗರದಲ್ಲಿ ಲಭ್ಯವಾಗುತ್ತಿರುವ ಪಾಲಕ್‌ ಅನ್ನು ಸೇವಿಸಬಾರದು ಎಂದು ವರದಿಯಲ್ಲಿ ಪ್ರಮುಖವಾಗಿ ಹೇಳಿದ್ದು, ಎಲೆ ತರಕಾರಿಗಳಲ್ಲಿ ಭಾರವಾದ ಲೋಹಗಳ ಪ್ರಮಾಣ ಇತರೆ ತರಕಾರಿಗಳಿಗಿಂತ ಹೆಚ್ಚಿದೆ ಎಂದು ತಿಳಿಸಿದೆ.

ಸಂಶೋಧನೆ ತಂಡದ ವಿಜ್ಞಾನಿ ಎನ್‌. ಹೇಮಾ ಮಾತನಾಡಿ, ‘ತರಕಾರಿಗಳ ಮೂಲವನ್ನು ಪತ್ತೆಹಚ್ಚುವ ವಿಧಾನವನ್ನು ಮತ್ತಷ್ಟು ವೃದ್ಧಿಸಿಕೊಂಡು, ಖಾತರಿಪಡಿಸಿಕೊಳ್ಳಬೇಕು. ತರಕಾರಿಗಳಲ್ಲಿನ ಲೋಹಗಳ ಗರಿಷ್ಠ ಪ್ರಮಾಣವನ್ನು ಮತ್ತು ಅದರ ಬಳಕೆಯ ಅವಧಿಯನ್ನು ಪರಾಮರ್ಶಿಸಬೇಕು. ಈ ಲೋಹಗಳು ಮಕ್ಕಳು, ವಯಸ್ಕರು ಹಾಗೂ ವೃದ್ಧರ ಮೇಲೆ ಯಾವ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತವೆ ಎಂಬುದನ್ನು ಬಹಿರಂಗಪಡಿಸಬೇಕು. ಈ ತರಕಾರಿಗಳನ್ನು ಸೇವಿಸುವುದರಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ಸಮಗ್ರವಾಗಿ ವಿವರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT