ಬೆಂಗಳೂರು: ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದ್ದ ವೇಳೆ ಆಯತಪ್ಪಿ ಸುಮಾರು 35 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕನಕಪುರ ಮುಖ್ಯರಸ್ತೆಯ ಬೈಯ್ಯನಪಾಳ್ಯದ ಭರಣಿ ಗ್ರಾನೈಟ್ ಮುಂಭಾಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನರಸಿಂಹಮೂರ್ತಿ (34) ಮೃತಪಟ್ಟವರು. ಮೃತನ ತಂದೆ ಹನುಮಂತಪ್ಪ ಅವರು ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೇ 16ರಂದು ಬೆಳಿಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಗೆ ಬಿದ್ದ ನರಸಿಂಹ ಮೂರ್ತಿಯನ್ನು ಆಸ್ಪತ್ರೆಗೆ ತಕ್ಷಣ ಕೊಂಡೊಯ್ದರೂ ಪ್ರಯೋಜನ ಆಗಲಿಲ್ಲ ಎಂದು ಕಾಮಗಾರಿ ಸ್ಥಳದಲ್ಲಿದ್ದ ಎಂಜಿನಿಯರ್ ಮಂಜುನಾಥ್ ಮತ್ತು ಮೇಲ್ವಿಚಾರಕ ಉಮೇಶ್ ಎಂಬವರು ನೀಡಿದ ಮಾಹಿತಿ ಆಧರಿಸಿ ದೂರು ದಾಖಲಾಗಿದೆ.
‘ವಾರದ ಹಿಂದೆಯಷ್ಟೆ ಮನೆಗೆ ಬಂದಿದ್ದ ಮಗ, ಎಲ್ಲರನ್ನೂ ಮಾತನಾಡಿಸಿಕೊಂಡು ಮರಳಿ ಬೆಂಗಳೂರಿಗೆ ತೆರಳಿದ್ದ. ಘಟನೆ ದಿನ ಬೆಳಿಗ್ಗೆ ಅಶೋಕ್ ಎಂಬವರು ಕರೆ ಮಾಡಿ ಮಾಹಿತಿ ನೀಡಿದರು’ ಎಂದೂ ದೂರಿನಲ್ಲಿ ಹನುಮಂತಪ್ಪ ತಿಳಿಸಿದ್ದಾರೆ.
‘ಫ್ಲೈ ಓವರ್ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳದ ಕಾರಣ ಮಗ ಸಾವಿಗೀಡಾಗಿದ್ದಾನೆ. ಹೀಗಾಗಿ, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಬಲರಾಮರೆಡ್ಡಿ, ಎಂಜಿನಿಯರ್ ಮಂಜುನಾಥ್ ಮತ್ತು ಮೇಲ್ವಿಚಾರಕ ಉಮೇಶ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.