ಬೆಂಗಳೂರು: ‘ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ಷೇತ್ರದಲ್ಲಿ ನವನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೊಳ್ಳಲಾಗಿದೆ’ ಎಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು.
ಕನಕಪುರ ರಸ್ತೆಯ ಸಿಂಗಾಪುರ್ ಗಾರ್ಡನ್ ಬಡಾವಣೆ ಬಳಿ ₹8 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕ್ಷೇತ್ರದ ಎಲ್ಲ ರಸ್ತೆ ಮತ್ತು ಒಳಚರಂಡಿ ಕಾಮಗಾರಿ, ಉದ್ಯಾನ, ಬೀದಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಲು ನಗರೋತ್ಥಾನ ವತಿಯಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಶೀಘ್ರದಲ್ಲೇ ಮುಗಿಸಿ ನಾಗರಿಕರಿಗೆ ಸೌಲಭ್ಯಕ್ಕೆ ಸಿಗುವಂತೆ ಮಾಡಬೇಕು’ ಎಂದು ಸೂಚಿಸಿದರು.
‘ಕನಕಪುರ ರಸ್ತೆಯಿಂದ ಗುಬ್ಬಲಾಳ, ಸುಬ್ರಹ್ಮಣ್ಯಪುರ, ಉತ್ತರಹಳ್ಳಿಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ’ ಎಂದೂ ಹೇಳಿದರು.
ಸ್ಥಳೀಯ ಮುಖಂಡ ಹನುಮಂತಯ್ಯ,‘ಈ ವ್ಯಾಪ್ತಿ ಸಂಪೂರ್ಣ ಗ್ರಾಮೀಣ ಪ್ರದೇಶಕ್ಕೆ ಸೇರ್ಪಡೆಯಾಗಿತ್ತು. ಅಭಿವೃದ್ಧಿಗೆ ಸಾಕಷ್ಟು ಅನುದಾನವೂ ಇರಲಿಲ್ಲ. ಕೃಷ್ಣಪ್ಪ ಅವರು ಶಾಸಕರಾದ ನಂತರ ವಿವಿಧ ಮೂಲಗಳಿಂದಹಂತಹಂತವಾಗಿ ಅನುದಾನ ತಂದಿದ್ದಾರೆ. ಇದರಿಂದ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ’ ಎಂದರು.