ಬೆಂಗಳೂರು: ‘ಯಕ್ಷಗಾನವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪರಿಣಾಮಕಾರಿ ಕಲಾ ಮಾಧ್ಯಮ. ಇದು ನಮ್ಮ ನಾಡಿನ ಹೆಮ್ಮೆಯ ಕಲೆ. ಹಲವು ಪೌರಾಣಿಕ ಕಥೆಗಳನ್ನು ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದು’ ಎಂದು ಭಾರತೀಯ ಆಯುರ್ವೇದ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಎ.ಕಿಶೋರ್ ಹೇಳಿದರು.
ಕಲಾ ಕದಂಬ ಆರ್ಟ್ ಸೆಂಟರ್, ಚಿಕ್ಕಲಸಂದ್ರದ ಕೆಎಸ್ಆರ್ಟಿಸಿ ಬಡಾವಣೆಯಲ್ಲಿರುವ ಸಿದ್ಧಿ ಗಣಪತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ 2020–21ನೇ ಸಾಲಿನ ಯಕ್ಷಗಾನ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಚಂದನ ವಾಹಿನಿಯ ನಿರೂಪಕಿ ಸ್ನೇಹಾ ನೀಲಪ್ಪಗೌಡ ‘ಪುರುಷ ಕಲಾಪ್ರಕಾರವೆನಿಸಿರುವ ಯಕ್ಷಗಾನದಲ್ಲಿ ಮಹಿಳೆಯರೂ ಛಾಪು ಮೂಡಿಸುತ್ತಿರುವುದು ಖುಷಿಯ ವಿಚಾರ. ನಾವೆಲ್ಲಾ ಈ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ‘ಕೃಷ್ಣ ಗಾರುಡಿ’ ಯಕ್ಷಗಾನ ಪ್ರದರ್ಶಿಸಿದರು. ಕಲಾ ಕದಂಬ ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣ ಉರಾಳ ಇದನ್ನು ನಿರ್ದೇಶಿಸಿದ್ದರು.
ಸಿದ್ಧಿ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಇದ್ದರು.