ಬೆಂಗಳೂರು: ನಗರದಲ್ಲಿ ಮಂಗಳವಾರ ಜರುಗಿದ ಸೂರ್ಯನ ‘ಶೂನ್ಯ ನೆರಳು’ ಕೌತುಕವನ್ನು ಜನರು ಕಣ್ತುಂಬಿಕೊಂಡರು.
ಜವಾಹರ್ಲಾಲ್ ನೆಹರು ತಾರಾಲಯ, ಪುರಭವನ ಎದುರು, ಅಪಾರ್ಟ್ಮೆಂಟ್ ಸಮುಚ್ಚಯ, ಶಾಪಿಂಗ್ ಮಾಲ್ಗಳ ಆವರಣ, ಇತರೆಡೆ ಸೇರಿದ್ದ ಜನ, ಕೌತುಕ ವೀಕ್ಷಣೆಗೆ ಕಾಯುತ್ತಿದ್ದರು. ಪೋಷಕರು ಮಕ್ಕಳಿಗೆ ಕೌತುಕ ತೋರಿಸಲು ಉತ್ಸುಕರಾಗಿದ್ದರು.
ಮಧ್ಯಾಹ್ನ 12.17ರ ಸುಮಾರಿಗೆ ಸೂರ್ಯನ ಕಿರಣಗಳು ಭೂಮಿಗೆ ಬಿದ್ದಾಗ, ಶೂನ್ಯ ನೆರಳು ಖಗೋಳ ಕೌತುಕ ಜರುಗಿತು.
ಈ ಸಂದರ್ಭದಲ್ಲಿ ಮನುಷ್ಯರು ಹಾಗೂ ಇತರೆ ವಸ್ತುಗಳ ನೆರಳು, ಅಕ್ಕ– ಪಕ್ಕದಲ್ಲಿ ಕಾಣಿಸಲಿಲ್ಲ. ಕೆಲವರು ಪರಸ್ಪರ ಕೈ ಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿ, ಶೂನ್ಯ ನೆರಳು ಕೌತುಕವನ್ನು ಪರೀಕ್ಷಿಸಿದರು.
ಈ ಖಗೋಳ ಕೌತುಕದ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡ ಜನ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಸೇರಿದ್ದ ಶಾಲಾ ವಿದ್ಯಾರ್ಥಿಗಳಿಗೆ ಕೌತುಕವನ್ನು ತೋರಿಸಿದ ವಿಜ್ಞಾನಿಗಳು, ವೈಜ್ಞಾನಿಕ ವಿವರಣೆ ನೀಡಿದರು.