ಬೆಂಗಳೂರು: ಆಹಾರ ಪೂರೈಕೆ ತಡವಾಗಿದ್ದ ಕಾರಣಕ್ಕೆ ಗ್ರಾಹಕಿ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಪ್ರಕರಣಕ್ಕೆ ಮತ್ತೊಂದು ಆಯಾಮ ಸಿಕ್ಕಿದ್ದು, ‘ಮಹಿಳೆಯೇ ತಮ್ಮ ಉಂಗುರದಿಂದ ಮುಖಕ್ಕೆ ಹೊಡೆದು ಕೊಂಡಿದ್ದರು’ ಎಂದು ಜೊಮ್ಯಾಟೊ ಕಂಪನಿ ಡೆಲಿವರಿ ಬಾಯ್ ಕಾಮರಾಜ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದಿರುವ ಕಾಮರಾಜ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದಾರೆ.
‘ಸಂಚಾರ ದಟ್ಟಣೆಯಲ್ಲೂ ಕಷ್ಟಪಟ್ಟು ಯುವತಿಯ ಮನೆಗೆ ಆಹಾರ ತಲುಪಿಸಿದ್ದೆ. ಹಣ ನೀಡಬಹುದೆಂದು ಬಾಗಿಲಲ್ಲಿ ಕಾಯುತ್ತಿದ್ದೆ. ಆಹಾರ ನೀಡಿದ್ದು ತಡವಾಯಿತೆಂದು ಯುವತಿ ಜೋರಾಗಿ ಹೇಳಿದ್ದರು.
ದಟ್ಟಣೆ ಹಾಗೂ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದರಿಂದ ತಡವಾಯಿತೆಂದು ಕ್ಷಮೆ ಯಾಚಿಸಿದ್ದೆ’ ಎಂದು ಡೆಲಿವರಿ ಬಾಯ್ ವಿಡಿಯೊದಲ್ಲಿ ಹೇಳಿದ್ದಾರೆ.
‘ಆಹಾರಕ್ಕೆ ಹಣ ನೀಡಲು ಒಪ್ಪದ ಯುವತಿ, ಸಹಾಯವಾಣಿಗೆ ಕರೆ ಮಾಡಿದ್ದರು. ಆಹಾರ ವಾಪಸು ನೀಡುವಂತೆ ಸಹಾಯವಾಣಿ ಸಿಬ್ಬಂದಿ ಯುವತಿಗೆ ಹೇಳಿದ್ದರು. ಹೀಗಾಗಿ, ಆಹಾರದ ಪೊಟ್ಟಣವನ್ನು ಮರಳಿಸುವಂತೆ ಕೋರಿದ್ದೆ. ಅದಕ್ಕೂ ಒಪ್ಪದ ಯುವತಿ, ಬೈಯಲಾರಂಭಿಸಿದ್ದರು.’
‘ಸ್ಥಳದಿಂದ ಮರಳಿ ಹೊರಟಿದ್ದೆ. ಯುವತಿಯೇ ನನ್ನ ಮೇಲೆ ಚಪ್ಪಲಿ ಎಸೆದರು. ತಮ್ಮ ಕೈಯಿಂದ ಹೊಡೆಯಲು ಬಂದರು. ನಾನು ತಪ್ಪಿಸಿಕೊಂಡೆ. ನಂತರ, ಆಕೆಯ ಕೈಯಲ್ಲಿದ್ದ ಉಂಗುರವೇ ಅವರ ಮುಖಕ್ಕೆ ತಾಗಿತ್ತು. ಅವರ ಮುಖದಲ್ಲಿ ರಕ್ತ ಬರಲಾರಂಭಿಸಿತ್ತು. ಭಯಗೊಂಡು ನಾನು ಅಲ್ಲಿಂದ ಹೊರಟೆ’ ಎಂದೂ ಅವರು ವಿವರಿಸಿದ್ದಾರೆ.