ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು `ಮೆಟ್ರೊ~ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ ಟಿ.ವಿ.ಯಲ್ಲಿ ವೀಕ್ಷಿಸಿದರು.
ಖಾಸಗಿ ವಾಹಿನಿಯಲ್ಲಿ ನೇರ ಪ್ರಸಾರವಾದ ಕಾರ್ಯಕ್ರಮವನ್ನು ಅವರು ವೀಕ್ಷಿಸಿದರು. ಬೆಳಿಗ್ಗೆ 5.30ಕ್ಕೆ ಎದ್ದ ಅವರು ಒಟ್ಟು ಹದಿನೈದು ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಮನೆಯಿಂದ ತಂದಿದ್ದ ತಿಂಡಿಯನ್ನು ಅವರು ತಿಂದರು. ವೈದ್ಯರು ಆರೋಗ್ಯ ತಪಾಸಣೆ ನಡೆಸಲು ಹೋದಾಗ `ನನಗೇನೂ ಆಗಿಲ್ಲ. ತಪಾಸಣೆ ಮಾಡುವುದು ಬೇಡ~ ಎಂದು ಹೇಳಿ ಕಳುಹಿಸಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಅವರು ಮನೆಯ ಊಟವನ್ನೇ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪುಸ್ತಕಗಳು ವಾಪಸ್: ಗ್ರಂಥಾಲಯದಿಂದ ಪಡೆದಿದ್ದ ಹತ್ತು ಪುಸ್ತಕಗಳನ್ನು ಯಡಿಯೂರಪ್ಪ ವಾಪಸ್ ನೀಡಿದ್ದಾರೆ. ಪುಸ್ತಕದಲ್ಲಿ ಅಕ್ಷರಗಳ ಗಾತ್ರ ಕಿರಿದಾಗಿರುವುದರಿಂದ ಓದಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮರಳಿಸಿದ್ದಾರೆ. ಗುರುವಾರ ಸಹ ಅವರು ಯಾರನ್ನೂ ಭೇಟಿ ಮಾಡಿಲ್ಲ. ಟಿ.ವಿ. ನೋಡುವುದು, ನಿದ್ರಿಸುವ ಮೂಲಕ ಅವರು ಕಾಲ ಕಳೆದಿದ್ದಾರೆ.
ಯಡಿಯೂರಪ್ಪ ಅವರಿಗೆ ಶೀತವಾಗಿತ್ತು ಮತ್ತು ಕೆಮ್ಮುತ್ತಿದ್ದರು. ಇದಕ್ಕಾಗಿ ಅವರು ಸಿರಪ್ ಕುಡಿದರು. ಉಳಿದಂತೆ ಅವರ ಆರೋಗ್ಯ ಚೆನ್ನಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ.