ಯಲಹಂಕ: `ದೂರ ಶಿಕ್ಷಣವು ಕೃಷಿಯನ್ನು ದೂರುವ ಶಿಕ್ಷಣವಾಗದೆ ಶಿಕ್ಷಣದಿಂದ ದೂರ ಸರಿದವರನ್ನು ಮರಳಿ ಪ್ರಗತಿಯತ್ತ ಬಲು ದೂರ ಕೊಂಡೊಯ್ಯುವ ಶಿಕ್ಷಣ ಮಾಧ್ಯಮವಾಗಬೇಕು~ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ. ಆನಂದ್ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ `ಕೃಷಿಯಲ್ಲಿ ದೂರ ಶಿಕ್ಷಣ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಇಲ್ಲಿ ಕಲಿಸುವ ಶಿಕ್ಷಕರು ನಾವು ಕಲಿಸುತ್ತೇವೆ ಮತ್ತು ನಾವೂ ಸಹ ಕಲಿಯುತ್ತೇವೆ ಎಂಬ ಧ್ಯೇಯದಿಂದ ಕೇವಲ ರೈತರಿಗಾಗಿ ದುಡಿಯದೆ, ಅವರೊಟ್ಟಿಗೆ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು~ ಎಂದು ಕರೆ ನೀಡಿದರು.
`ರೈತರು ಬೆಳೆಯುವ ಬೆಳೆಯ ಬೆಲೆಗಿಂತ ಅವರ ಬದುಕಿಗೆ ಬೆಲೆ ಬರಬೇಕು. ಆ ರೀತಿಯ ಬಯಕೆಗೆ ಈ ಶಿಕ್ಷಣ ಇಂಬು ನೀಡಲಿ~ ಎಂದು ಆಶಿಸಿದರು.
ವಿ.ವಿ. ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, `ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ 1100 ವಿದ್ಯಾರ್ಥಿಗಳು ದಾಖಲಾಗುತ್ತ್ದ್ದಿದು, ಕೃಷಿ ವಿಜ್ಞಾನವನ್ನು ರೈತರಿಗೆ ತಲುಪಿಸಲು ಈ ಸಂಖ್ಯೆ ಸಾಲದು. ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಸುಮಾರು 8-10 ವರ್ಷಗಳು ಹಿಡಿಯುತ್ತದೆ. ಈ ದಿಸೆಯಲ್ಲಿ ತಂತ್ರಜ್ಞಾನವನ್ನು ಬಹುಬೇಗನೆ ರೈತರಿಗೆ ನೇರವಾಗಿ ತಲುಪಿಸಲು ದೂರ ಶಿಕ್ಷಣ ನೆರವಾಗಲಿದೆ~ ಎಂದರು.
ನಿವೃತ್ತ ಕೃಷಿ ವಿಸ್ತರಣಾ ನಿರ್ದೇಶಕ ಪ್ರೊ.ವಿ. ವೀರಭದ್ರಯ್ಯ ಮಾತನಾಡಿ, `ಕೃಷಿ ವಿಜ್ಞಾನ ಮತ್ತು ತಾಂತ್ರಿಕತೆಯನ್ನು ರೈತರಿಗೆ, ಯುವಕ-ಯುವತಿಯರಿಗೆ ನೇರವಾಗಿ ತಲುಪಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಔಪಚಾರಿಕವಾಗಿ ದೂರ ಶಿಕ್ಷಣದಲ್ಲಿ ಸಮಗ್ರ ಕೃಷಿ ಪದ್ಧತಿ ಮತ್ತು ಕೋಯ್ಲೋತ್ತರ ಸಂಸ್ಕರಣೆ ಎಂಬ ಎರಡು ಕೋರ್ಸ್ಗಳನ್ನು ಆರಂಭಿಸಲಾಗಿದೆ~ ಎಂದು ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಬಿ. ಮಲ್ಲಿಕ್, ದೂರ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ.ನಾರಾಯಣಸ್ವಾಮಿ, ಕೃಷಿ ವಿಸ್ತರಣಾ ನಿರ್ದೇಶಕ ಆರ್.ಎಸ್.ಕುಲಕರ್ಣಿ, ಪ್ರಭಾರ ಸಂಶೋಧನಾ ನಿರ್ದೇಶಕ ಡಾ.ಅರುಣ್ ಕುಮಾರ್, ಪ್ರಾಧ್ಯಾಪಕ ಡಾ.ಕೆ.ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.