ತಲಘಟ್ಟಪುರ: ಶತ ಶತಮಾನಗಳಿಂದ ಸೌಲಭ್ಯಗಳಿಂದ ವಂಚಿತವಾಗಿರುವ ಭೋವಿ ಜನಾಂಗದ ಅಭಿವೃದ್ಧಿಗೆ ಮೀಸಲಾತಿ ಅಗತ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಭೋವಿ ಕ್ಷೇಮಾಭ್ಯುದಯ ಸೇವಾ ಸಂಘದ ಅಧ್ಯಕ್ಷ ಎಸ್.ಚಿನ್ನಸ್ವಾಮಿ ಹೇಳಿದರು.
ಕನಕಪುರ ರಸ್ತೆಯ ಗುಬ್ಬಲಾಳ ಕ್ರಾಸ್ನಲ್ಲಿ ಕರ್ನಾಟಕ ಪ್ರದೇಶ ಭೋವಿ ಕ್ಷೇಮಾಭ್ಯುದಯ ಸೇವಾ ಸಂಘ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ 839ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಸರ್ಕಾರ ಕೂಡಲೇ ಭೋವಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಧಾನ ನೀಡಬೇಕು. ಹೊಟ್ಟೆಪಾಡಿಗಾಗಿ ಊರೂರು ಅಲೆಯುವ ಜನಾಂಗಕ್ಕೆ ಶಾಶ್ವತ ನೆಲೆ ಕಲ್ಪಿಸಬೇಕು. ಸಿದ್ದರಾಮೇಶ್ವರರ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು~ಎಂದರು.
`ಸಾವಿರಾರು ಕೆರೆ-ಕುಂಟೆ, ಗುಂಡು ತೋಪು, ಅಣೆಕಟ್ಟು ನಿರ್ಮಿಸಿದ ಕೀರ್ತಿ ಜನಾಂಗಕ್ಕೆ ಸಲ್ಲಬೇಕು. ರಾಜ್ಯ ಸರ್ಕಾರಕ್ಕೆ ಭೋವಿ ಜನಾಂಗಕ್ಕೆ ಎಲ್ಲ ರೀತಿಯ ಸಹಕಾರ ನೀಡಿದಾಗ ಮಾತ್ರ ಸಮುದಾಯ ಬೆಳವಣಿಗೆ ಹೊಂದಲು ಸಾಧ್ಯ~ ಎಂದು ಪ್ರಧಾನ ಕಾರ್ಯದರ್ಶಿ ಅಗ್ನಿ ಶ್ರೆನಿವಾಸ್ ಅಭಿಪ್ರಾಯಪಟ್ಟರು.
ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ, ನಗರ ಜಿಲ್ಲಾಧ್ಯಕ್ಷ ಪಿ.ಗಂಗರಾಜು, ಕಾನೂನು ಸಲಹೆಗಾರ ಎಂ.ಗೋಪಾಲ್, ಕೋಲಾರ ಜಿಲ್ಲಾಧ್ಯಕ್ಷ ಎಸ್.ಸೀನಪ್ಪ, ರಾಜ್ಯ ಉಪಾಧ್ಯಕ್ಷ ವೆಂಕಟೇಶ್, ಮುಖಂಡರಾದ ಅಣ್ಣಯ್ಯಪ್ಪ, ರವಿ ಮಾತನಾಡಿದರು. ಖಜಾಂಚಿ ಉಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.