ಬೆಂಗಳೂರು: ರಷ್ಯಾದ ಸಂಸದ ಅಲೆಗ್ಸಾಂಡರ್ ಬೇಡನ್ ನೇತೃತ್ವದ ನಿಯೋಗವು ಗುರುವಾರ ಇಲ್ಲಿ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ಕುಮಾರ್ ಅವರನ್ನು ಭೇಟಿ ಮಾಡಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ, ಶಾಲಾ ಮಕ್ಕಳು ಮತ್ತು ಕಲಾವಿದರ ವಿನಿಯೋಗ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿತು.2003ರಲ್ಲಿ ರಷ್ಯಾದ ಸಮ್ಮಾರ್ ಪ್ರಾಂತ್ಯ ಮತ್ತು ಕರ್ನಾಟಕದ ನಡುವೆ ಪರಸ್ಪರ ಸಹಕಾರ ಕುರಿತ ಒಪ್ಪಂದವಾಗಿತ್ತು.ಆದರೆ ಇದುವರೆಗೆ ಅದರ ಅನುಷ್ಠಾನವಾಗಿಲ್ಲ. ಹೀಗಾಗಿ ಒಪ್ಪಂದದಲ್ಲಿನ ಅಂಶಗಳನ್ನು ಜಾರಿಗೆ ತರಲು ನಿಯೋಗ ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಸುರೇಶ್ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಇಲ್ಲಿನ ಶಾಲಾ ಮಕ್ಕಳು, ಕಲಾವಿದರನ್ನು ರಷ್ಯಾಗೆ ಕಳುಹಿಸಿಕೊಡುವುದು, ಅಲ್ಲಿನ ವಿದ್ಯಾರ್ಥಿಗಳು, ಕಲಾವಿದರನ್ನು ಇಲ್ಲಿಗೆ ಕರೆಸಿಕೊಳ್ಳುವ ಕುರಿತು ಹಿಂದೆ ಒಪ್ಪಂದವಾಗಿದೆ. ಈ ಹಿನ್ನೆಲೆಯಲ್ಲಿ ನಿಯೋಗವು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನೂ ಭೇಟಿ ಮಾಡಿ ಸಮಾಲೋಚಿಸಿತು. ನಿಯೋಗವು ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್, ರೋರಿಕ್ ಎಸ್ಟೇಟ್, ಇನ್ಫೋಸಿಸ್ ಮೊದಲಾದ ಉದ್ದಿಮೆಗಳಿಗೆ ಭೇಟಿ ನೀಡಿತ್ತು.