ಚಿಟಗುಪ್ಪ: ಕೋವಿಡ್ ಸೋಂಕಿನಿಂದ ಗುಣಮುಖರಾದ 21 ಮಂದಿಯನ್ನು ಇಲ್ಲಿನ ಖಾಸಗಿ ಸಭಾ ಭವನದಲ್ಲಿ ನಿರ್ಮಿಸಿರುವ ಕೋವಿಡ್ ಸೆಂಟರ್ನಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಆಸ್ಪತ್ರೆ ಹೊರಭಾಗದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ನೋಡಲ್ ಅಧಿಕಾರಿ ಡಾ.ಗೋವಿಂದರಾವ್ ಮಾತನಾಡಿ, ‘ಕೋವಿಡ್ ಸೋಂಕು ಹರಡದಂತೆ ಎಲ್ಲರೂ ಎಚ್ಚರ ವಹಿಸಬೇಕು. ಸೋಂಕಿತರು ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವ ಕಾರ್ಯ ಮಾಡುತ್ತಿದೆ’ ಎಂದರು.
ತಹಶೀಲ್ದಾರ್ ಜಿಯಾವುಲ್ಲ, ವೈದ್ಯಾಧಿಕಾರಿ ವೀರನಾಥ್ ಕನಕ್, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್ ಅವರು ಚಪ್ಪಾಳೆ ತಟ್ಟಿ, ಸಿಹಿ ನೀಡಿದರು. ಸೋಂಕು ಮುಕ್ತ ಪ್ರಮಾಣಪತ್ರ ನೀಡಿದರು.
ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಬಹಳ ಚೆನ್ನಾಗಿ ನೋಡಿಕೊಂಡರು ಎಂದು ಗುಣಮುಖರಾದವರು ಸಂತಸ ವ್ಯಕ್ತಪಡಿಸಿದರು.