ಜನವಾಡ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜನಪದ ಕಲಾವಿದರ ಬಳಗದ ಆಶ್ರಯದಲ್ಲಿ ಕರ್ನಾಟಕ-ತೆಲಂಗಾಣ ಗಡಿ ಸಮೀಪ ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದಲ್ಲಿ ನಮ್ಮ ಹಳ್ಳಿಯ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.
ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಇಂದು ಹಳ್ಳಿಗಳಲ್ಲೇ ನೆಲಮೂಲದ ಸಂಸ್ಕೃತಿ ಹಾಗೂ ಕಲೆಗಳು ಉಳಿದುಕೊಂಡಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಕಲೆ ಹಾಗೂ ಕಲಾವಿದರನ್ನು ಪೋಷಿಸಬೇಕಾಗಿದೆ’ ಎಂದರು.
ಬಿಜೆಪಿ ಮುಖಂಡ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಇಂತಹ ಕಾರ್ಯಕ್ರಮಗಳ ದೇಸಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಾಬುರಾವ ಮಲ್ಕಾಪೂರೆ, ನೃತ್ಯ ಕಲಾವಿದ ಬಳ್ಳಾರಿಯ ಬಸವರಾಜ ಮಾತನಾಡಿದರು. ಪಿಡಿಒ ವೀರಶೆಟ್ಟಿ ಪಾಟೀಲ ಮತ್ತು ಮುಖಂಡ ವಿಕ್ರಮ ಮುದಾಳೆ ಇದ್ದರು.