ಬಸವಕಲ್ಯಾಣ: ತಾಲ್ಲೂಕಿನ ಮಲ್ಲಿಕಾರ್ಜುನವಾಡಿ ಗ್ರಾಮದಲ್ಲಿ ಗುರುವಾರ ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಇಲ್ಲಿನ ಮನೆಮನೆಗಳಲ್ಲಿ ಎತ್ತುಗಳ ಮೈ ತೊಳೆದು ಕೋಡುಗಳಿಗೆ ಬಣ್ಣ ಹಚ್ಚಿ, ಮೈಮೇಲೆ ಝೂಲಾ ಹೊದಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕೋಡುಬಳೆ, ಎಣ್ಣೊಳಗಿ, ಹೋಳಿಗೆಯ ಊಟ ಸವಿದು ಸಂಜೆ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಚಕ್ಕಡಿಗಳಿಗೆ ತಳೀರು ತೋರಣ ಹಾಗೂ ಬಲೂನ್ಗಳನ್ನು ಕಟ್ಟಿ ಮುಖ್ಯ ರಸ್ತೆಯಲ್ಲಿ ಓಡಿಸಲಾಯಿತು. ಪ್ರಥಮ ಸ್ಥಾನ ಪಡೆದ ಶಿವಕಾಂತ ಪೀಣೆಭಾಯಿ ಅವರ ಜೋಡೆತ್ತುಗಳಿಗೆ ₹2,100 ಬಹುಮಾನ, ಎರಡನೇ ಸ್ಥಾನ ಪಡೆದ ಗೋರಖ ಹೆಗಡೆ ಅವರಿಗೆ ₹1,100 ಬಹುಮಾನ ಹಾಗೂ ತೃತೀತ ಸ್ಥಾನ ಪಡೆದ ಪವನ ಪುಣೆ ಅವರ ಎತ್ತುಗಳಿಗೆ ₹500 ಬಹುಮಾನ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ಮೂಲಗೆ ಬಹುಮಾನ ವಿತರಿಸಿದರು. ಸದಸ್ಯರಾದ ವಿಷ್ಣುವರ್ಧನ ಪುಣೆ, ಗೋದಾವರಿ ಪುಣೆ, ಸುಭಾಷ ಅಂತಪನಳ್ಳಿ, ಸಂತೋಷ ಶೀಗಿ, ಸತೀಶ ರಂಜೇರಿ, ಪ್ರವೀಣ ಪುಣೆ, ಸತೀಶ ಪೋಸ್ತಾರ್, ರವಿ ಹೆಗಡೆ, ನಾಗಣ್ಣ ಗಾರಂಪಳ್ಳಿ, ವಿಠಲ್ ಹೆಗಡೆ, ಮಚೇಂದ್ರ ಪುಣೆ, ಪಂಡಿತ್ ಭಾರಂಭಾಯಿ ಇದ್ದರು.