ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಬಂಧನಕ್ಕೆ ಆಗ್ರಹ

ಗುರುನಾನಕ ದೇವ್‌ ಕಾಲೇಜಿನ ಘಟನೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Published 30 ಮೇ 2024, 16:10 IST
Last Updated 30 ಮೇ 2024, 16:10 IST
ಅಕ್ಷರ ಗಾತ್ರ

ಬೀದರ್‌: ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರನ್ನು ಎರಡು ದಿನದೊಳಗೆ ಬಂಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು, ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಾಲೇಜಿನ ಆವರಣದಲ್ಲಿ ಶಾಂತಿಯಿರಬೇಕು ಎಂದು ಎಬಿವಿಪಿ ಬಯಸುತ್ತದೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಜಿಎನ್‌ಡಿ ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಎರಡು ದಿನದ ಒಳಗೆ ತಪ್ಪಿಸ್ಥರನ್ನು ಬಂಧಿಸಬೇಕು. ತಪ್ಪಿತಸ್ಥರಲ್ಲದವರ ವಿರುದ್ದ ದಾಖಲಾದ ಪ್ರಕರಣಗಳನ್ನು ತಕ್ಷಣವೇ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕಾಲೇಜಿನ ಫೆಸ್ಟ್‌ ಕಾರ್ಯಕ್ರಮಕ್ಕೆ ಬುಧವಾರ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಜೈಶ್ರೀರಾಮ್‌ ಹಾಡಿಗೆ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿ ರಕ್ತಸ್ರಾವವಾಗುವಂತೆ ಹೊಡೆದಿದ್ದಾರೆ. ಗುಪ್ತಾಂಗಗಳ ಮೇಲೆಯೂ ಹೊಡೆದಿದ್ದಾರೆ. ಇದು ತೀವ್ರ ಖಂಡನಾರ್ಹ. ಈ ಕುರಿತು ಗಾಂಧಿ ಗಂಜ್‌ ಠಾಣೆಗೆ ತೆರಳಿ ದೂರು ಕೊಡಲಾಗಿತ್ತು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಘಟನೆಗೆ ರಾಜಕೀಯ ಲೇಪನ ಮಾಡುತ್ತಿರುವುದು ಖಂಡನೀಯ. ಘಟನೆ ನಡೆದ ದಿನವೇ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಭೇಟಿ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ. ಹಲ್ಲೆ ಮಾಡಿದವರ ಮೇಲೆ ಪ್ರತಿ ದಾಳಿ ನಡೆದಿಲ್ಲ. ಕಾಲೇಜಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಬಹುದು. ಆದರೆ, ಹಲ್ಲೆ ನಡೆಸಿದವರೇ ಬುಧವಾರ ರಾತ್ರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಎಲ್ಲ ಗೊತ್ತಿದ್ದರೂ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಗುರುನಾನಕ ದೇವ್‌ ಎಂಜಿನಿಯರಿಂಗ್ ಕಾಲೇಜು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಿದೆ. ಆದರೆ, ಕೆಲ ಕೀಡಿಗೇಡಿಗಳು ಕಾಲೇಜಿಗೆ ಕೆಟ್ಟ ಹೆಸರು ತರಲು ಈ ಕೃತ್ಯ ಎಸಗಿದ್ದಾರೆ. ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿಯದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಮಾತನಾಡಿ, ನಾನು ಪ್ರತಿನಿಧಿಸುವ ವಾರ್ಡಿನಲ್ಲಿ ಘಟನೆ ನಡೆದಿರುವುದು ಖೇದಕರ. ರಕ್ತಬರುವ ರೀತಿಯಲ್ಲಿ ಹಲ್ಲೆಗೈದು ಬಳಿಕ ಅವರೇ ಹೋಗಿ ನಮ್ಮ ಮೇೆಲೆ ಹಲ್ಲೆಯಾಗಿದೆಯೆಂದು ಪ್ರಕರಣ ದಾಖಲಿಸುತ್ತಾರೆ ಎಂದರೆ ಏನರ್ಥ? ಇದರ ಹಿಂದೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದರು.

ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಹೇಮಂತ್, ಜಿಲ್ಲಾ ಸಂಯೋಜಕ ಅಂಬರೀಶ, ಪ್ರಮುಖರಾದ ಗುರುನಾಥ್ ರಾಜಗೀರಾ, ಭೀಮ್ಮಣ್ಣ ಸುರಳ್ಳಿ, ಅಮರ್, ನಾಗರಾಜ್, ಪವನ್, ನಟರಾಜ್, ರಾಜ್ ಸಾಯಿನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ’ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಡಿಜೆ ಹಾಕಿದ್ದರು. ರ್‍ಯಾಂಡಮ್‌ ಆಗಿ ಹಾಡುಗಳನ್ನು ಹಾಕುತ್ತಿದ್ದರು. ಕೊನೆಯಲ್ಲಿ ಜೈಶ್ರೀರಾಮ್‌ ಹಾಡು ಹಾಕಿದರು. ಅದು ಉದ್ದೇಶಪೂರ್ವಕವಾಗಿ ಆಗಿರಲಿಲ್ಲ. ಆಗ ಅನ್ಯ ಕೋಮಿನ ಸುಮಾರು 25ರಿಂದ 30 ವಿದ್ಯಾರ್ಥಿಗಳು ಡಿ.ಜೆ ವೈರ್‌ ಕಿತ್ತು ಹಾಕಿ ಏಳೆಂಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ವೀರೇಂದ್ರ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಸಂಜೆ ಕೇಸ್‌ ಕೊಟ್ಟಿದ್ದೆವು. ಆದರೆ ಹಲ್ಲೆ ನಡೆಸಿದವರು ತಮ್ಮ ಮೇಲೆ ಹಲ್ಲೆ ಆಗಿದೆ ಎಂದು ಪ್ರತಿ ದೂರು ಕೊಟ್ಟಿದ್ದಾರೆ. ಸರ್ಕಾರ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಿಂದೆಯೂ ಕಾಲೇಜಿನಲ್ಲಿ ಈ ರೀತಿಯ ಘಟನೆಗಳಾಗಿವೆ. –ವೀರೇಂದ್ರ ಜಿಎನ್‌ಡಿ ಕಾಲೇಜು ವಿದ್ಯಾರ್ಥಿ

ಇದೇನು ಪಾಕಿಸ್ತಾನನಾ?

ನಮ್ಮ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ಈ ರೀತಿಯ ಘಟನೆಗಳು ಆಗುತ್ತಿವೆ. ಹಿಂದೂ ವಿದ್ಯಾರ್ಥಿಗಳನ್ನು ಗುರುತಿಸಿ ಈ ರೀತಿ ಮಾಡುತ್ತಿದ್ದಾರೆ. ಜೈ ಶ್ರೀರಾಮ್‌ ಹಾಡು ಹಾಕಿರುವುದಕ್ಕೆ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಹೊಡೆದಿದ್ದಾರೆ. ಅಲ್ಲಾಹು ಅಕ್ಬರ್‌ ಕೂಡ ಹೇಳಿದ್ದಾರೆ. ಇದೇನು ಪಾಕಿಸ್ತಾನನಾ? ಇದು ಇಂಡಿಯಾ. ಇದಕ್ಕೆ ಕಾರಣರಾದವರನ್ನು ಜೈಲಿಗೆ ಹಾಕಬೇಕು. ಅವರೆಲ್ಲ ಹೊರಗಿದ್ದಾರೆ. ನ್ಯಾಯ ಕೊಡಿಸಬೇಕು. –ನಿಖಿಲ್‌ ಪಾಟೀಲ ಜಿಎನ್‌ಡಿ ಕಾಲೇಜು ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT