ಬೀದರ್: ಬೀದರ್ ಜಿಲ್ಲೆಯಲ್ಲಿ ತಾಪಮಾನ ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ಬಿಸಿಲಿಗೆ ಜನ ಸುಸ್ತಾದರು.
ಗುರುವಾರ 38.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಜಿಲ್ಲೆಯಲ್ಲಿ ದಾಖಲಾಗಿತ್ತು. ಶುಕ್ರವಾರ ದಿಢೀರನೆ 42.1 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಉರಿ ಬಿಸಿಲು, ಝಳಕ್ಕೆ ಜನ ಸುಸ್ತು ಹೊಡೆದರು.
ಮಧ್ಯಾಹ್ನ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಸಂಜೆ ಆರು ಗಂಟೆಯ ನಂತರವೇ ಹೊರಗೆ ಜನರ ಓಡಾಟ ಕಂಡು ಬಂತು. ಏಕಾಏಕಿ ಬಿಸಿಲು ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ.
* ಹೊರಗೆ ಹೋಗುವಾಗ ಛತ್ರಿ ಬಳಸಬೇಕು. ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಬೇಕು.
* ತೆಳುವಾದ, ಸಡಿಲವಾದ ಹತ್ತಿ ಉಡುಪುಗಳನ್ನು ಧರಿಸಿ. ಆದಷ್ಟು ಬಿಳಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳುವುದು ಉತ್ತಮ.
* ಹತ್ತಿ ಅಥವಾ ಟರ್ಬನ ಟೋಪಿ, ಕೂಲಿಂಗ್ ಗ್ಲಾಸ್ ಧರಿಸಬೇಕು. ಹಿರಿಯ ನಾಗರಿಕರು, ಮಕ್ಕಳು ಹೆಚ್ಚು ನೀರು ಸೇವಿಸಬೇಕು.
* ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹೊರಾಂಗಣದಲ್ಲಿ ದೈಹಿಕ ಚಟುವಟಿಕೆ ಕಡಿಮೆ ಮಾಡಬೇಕು.
* ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಮಜ್ಜಿಗೆ/ಗ್ಲುಕೋಸ್/ಒಆರ್ಎಸ್ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು.