ಬೀದರ್: ಕೋವಿಡ್ 19 ಸೋಂಕಿನ ಪ್ರಯುಕ್ತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯ ಧನ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಆರೋಪಿಸಿದೆ.
ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಕೋವಿಡ್ 19 ಸೋಂಕಿನ ಕಾರಣ ರಾಜ್ಯ ಸರ್ಕಾರ ಕೊಡುತ್ತಿರುವ ₹ 5 ಸಾವಿರ ಸಹಾಯ ಧನ ಕೆಲವರಿಗೆ ಬಿಡುಗಡೆಯಾದರೆ, ಇನ್ನು ಕೆಲವರಿಗೆ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಒಂದು ವರ್ಷ ಹಾಗೂ ಒಂದು ವರ್ಷದ ಒಳಗೆ ಹೆಸರು ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸಹಾಯಧನ ತಲುಪಿದೆ. ಹಳೆಬರಿಗೆ ದೊರಕಿಲ್ಲ. ಸಹಾಯಧನ ಬಿಡುಗಡೆಯಾದವರಲ್ಲಿಯೂ ಅರ್ಧದಷ್ಟು ಮಂದಿ ನಿಜವಾದ ಕಾರ್ಮಿಕರಲ್ಲ ಎಂದು ಆರೋಪಿಸಿದರು.
ಆಗಿರುವ ಲೋಪವನ್ನು ಕೂಡಲೇ ಸರಿಪಡಿಸಬೇಕು. 2007 ರಿಂದ ಹೆಸರು ನೋಂದಾಯಿಸಿಕೊಂಡವರಿಗೆ ಸಹಾಯಧನ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಬಾಬುರಾವ್ ಹೊನ್ನಾ, ಎಐಟಿಐ ಜಿಲ್ಲಾ ಪ್ರಭಾರಿ ಅಲಿ ಅಹಮ್ಮದ್ ಖಾನ್, ನಜೀರ್ ಅಹಮ್ಮದ್, ಗುರುಪಾದಯ್ಯ ಸ್ವಾಮಿ, ಚಂದ್ರಭಾನ, ಪ್ರಭು ತಗಣಿಕರ್, ಪಪ್ಪುರಾಜ ಮೇತ್ರೆ, ಎಂ.ಡಿ. ಶಫಾಯತ್ ಅಲಿ, ಮುನಿರೊದ್ದಿನ್ ಇದ್ದರು.