ಬೀದರ್: ಹಾವೇರಿ ಜಿಲ್ಲೆಯ ನರಸಿಂಹಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ 900ನೇ ಜಯಂತ್ಯುತ್ಸವದ ಪ್ರಯುಕ್ತ ಜನವರಿ 14 ಹಾಗೂ 15 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ಜನವರಿ 14 ರಂದು ಸಂಜೆ 5.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಜ 15 ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, ಸಾಮೂಹಿಕ ಸರಳ ವಿವಾಹ ಮಹೋತ್ಸವ, ವಚನಗ್ರಂಥ ಮೆರವಣಿಗೆ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಶಾಂತಮುನಿ ಸ್ವಾಮೀಜಿಯ ನಾಲ್ಕನೆಯ ಸ್ಮರಣೋತ್ಸವ, ಶಾಂತಭೀಮ ಸ್ವಾಮೀಜಿಯ ತೃತೀಯ ಪೀಠಾರೋಹಣದ ವಾರ್ಷಿಕೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ನಡೆಯಲಿದೆ’ ಎಂದು ತಿಳಿಸಿದರು.
‘ಸಮಾರಂಭದಲ್ಲಿ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನಾಡಿನ ಮಠಾಧೀಶರು, ಶರಣರು, ಸಂತರು ಸಾಹಿತಿಗಳು ಉಪನ್ಯಾಸ ನೀಡುವರು. ಬೀದರ್ ಜಿಲ್ಲೆಯಿಂದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದರು.
ಜಗನ್ನಾಥ ಜಮಾದಾರ, ಬಸವರಾಜ ಸಪ್ಪನಗೋಳ, ಸುನೀಲ ಕಾಶೆಂಪೂರ್, ಪಾಂಡುರಂಗ ಗುರೂಜಿ, ಸುನೀಲ ಭಾವಿಕಟ್ಟಿ ಹಾಗೂ ಶಿವರಾಜ ಬಂಬುಳಗಿ ಇದ್ದರು.