ಬೀದರ್: ನಾಲ್ಕು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರಿಗೆ ಸಲ್ಲಿಸಿದರು.
ಬಿಸಿಯೂಟ ತಯಾರಕರ ಕಲ್ಯಾಣ ಮಂಡಳಿ ರಚಿಸಬೇಕು. ಕನಿಷ್ಠ ವೇತನ ಕೊಡಬೇಕು. ಪಿ.ಎಫ್, ಇಎಸ್ಐ ಸೌಲಭ್ಯ ಕಲ್ಪಿಸಬೇಕು. ಅಪಘಾತ ಅಥವಾ ಮರಣ ಹೊಂದಿದ್ದಲ್ಲಿ ₹ 5 ಲಕ್ಷ ಪರಿಹಾರ ನೀಡಬೇಕು. ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸಬೇಕು. ಬೇಸಿಗೆ ರಜೆ ಹಾಗೂ ದಸರಾ ರಜೆ ನೀಡಬೇಕು. ಪ್ರತಿ ತಿಂಗಳ 5ನೇ ತಾರಿಖಿಗೆ ಸಂಬಳ ಬಿಡುಗಡೆ ಮಾಡಬೇಕು. 60 ವರ್ಷವಾದವರಿಗೆ ಮಾಸಿಕ ₹ 5 ಸಾವಿರ ನಿವೃತ್ತಿ ವೇತನ ಕಲ್ಪಿಸಬೇಕು. ₹ 2 ಲಕ್ಷ ಇಡುಗಂಟು ಕೊಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಾಂತಕುಮಾರ ಶೇರಿಕಾರ, ಉಪಾಧ್ಯಕ್ಷ ಮಹಮ್ಮದ್ ಶಫಿಯೊದ್ದಿನ್, ಪ್ರಧಾನ ಕಾರ್ಯದರ್ಶಿ ಮಾಣಿಕ ಧೂಳಗೆ, ತಾಲ್ಲೂಕು ಅಧ್ಯಕ್ಷರಾದ ರಾಜು ಕೊಡ್ಡಿಕರ್, ಕೆ.ಎಸ್. ಶಾಂತಕುಮಾರ, ದಿನಕರರಾವ್, ಚಂದ್ರಶೇಖರ ಪಾಟೀಲ, ವಿಜಯಕುಮಾರ ಪಾಲ್ಗೊಂಡಿದ್ದರು.