ಬೀದರ್: ದೇಶದ ವಿವಿಧೆಡೆ ಮುಸ್ಲಿಮ್ ಮುಖಂಡರ ಮೇಲೆ ನಡೆದಿರುವ ದಾಳಿ ಖಂಡಿಸಿ ನಗರದ 25 ಮುಸ್ಲಿಮ್ ಸಂಘಟನೆಗಳನ್ನು ಸೇರಿಸಿ ರಚಿಸಲಾದ ಸರ್ವ ಪಕ್ಷಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಮುಖಂಡರು ನಗರದಲ್ಲಿ ಮೆರವಣಿಗೆ ನಡೆಸಿದರು.
ಓಲ್ಡ್ಸಿಟಿಯ ಮೆಹಮೂದ್ ಗವಾನ್ ಮದರಸಾ ಆವರಣದಲ್ಲಿ ಜಮಾಯಿಸಿ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬ್ಯಾನರ್ ಹಾಗೂ ಪೋಸ್ಟರ್ಗಳನ್ನು ಹಿಡಿದು ಶಾಂತಿಯುತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿಪತ್ರ ಸಲ್ಲಿಸಿದರು.
ಮತಾಂತರದ ಸುಳ್ಳು ಆರೋಪ ಹೊರಿಸಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಅವರನ್ನು ಬಂಧಿಸಿದ್ದಾರೆ. ದೆಹಲಿಯಲ್ಲಿ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಮುಸ್ಲಿಮರು ರಾಜಕೀಯವಾಗಿ ಮುಂದೆ ಬರದಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ಪೊಲೀಸ್ ದಬ್ಬಾಳಿಕೆ ಹೆಚ್ಚಾಗಿದೆ. ಕೆಲ ಹಿಂದೂಪರ ಸಂಘಟನೆಗಳು ಕೋಮು ಭಾವನೆ ಕೆರಳಿಸುವಲ್ಲಿ ನಿರತವಾಗಿವೆ. ಅಂತಹ ಸಂಘಟನೆಗಳ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ಮಾಧ್ಯಮಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಬಿತ್ತುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮನ್ಸೂರ್ ಖಾದ್ರಿ ಹಾಗೂ ಮಹಮ್ಮದ್ ಗೌಸ್ ಖುರೇಶಿ ನೇತೃತ್ವದಲ್ಲಿ ಜಮಾತ್ ತಬ್ಲಿಕಿ, ಮುಸ್ಲಿಮ್ ಹುಮನ್ ರೈಟ್ಸ್ ಅಸೋಸಿಯೇಷನ್, ಜಮಾತ್ ಉಲ್ ಖುರೇಶಿ, ತಫಜ್ ಇ–ಖತ್ಮೆ ನೌಬತ್, ಸುನ್ನಿ ದಾವತ್ ಇ–ಇಸ್ಲಾಮಿ, ಮುಸ್ಲಿಮ್ ಇ– ಉಲಾಮಾ ವಾಲಾ, ತಾಂಬೋಳಿ, ಕರ್ನಾಟಕ ಮುಸ್ಲಿಮ್ ಕೌನ್ಸಿಲ್ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.