ಬಸವಕಲ್ಯಾಣ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಗರದಲ್ಲಿ ಬಸವಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು.
ಈ ನಿಮಿತ್ತವಾಗಿ ಮೇ 14, 15 ಮತ್ತು 16 ರಂದು ನಡೆಯುವ ನಗರದ ಪ್ರಸಿದ್ಧ ಬಸವೇಶ್ವರ ದೇವಸ್ಥಾನದ ಜಾತ್ರೆಯನ್ನು ಕೋವಿಡ್ ಪ್ರಭಾವದ ಕಾರಣ ರದ್ದುಗೊಳಿಸಿ, ಪಲ್ಲಕ್ಕಿ, ನಂದಿಧ್ವಜ ಮೆರವಣಿಗೆ, ರಥೋತ್ಸವ ನಡೆಸದಿರಲು ನಿರ್ಣಯ ಕೈಗೊಳ್ಳಲಾಯಿತು.
ಬಸವಜಯಂತಿಯ ದಿನ ದೇವಸ್ಥಾನದಲ್ಲಿ ಪೂಜೆ, ಸಂಜೆ ಐದು ಮಹಿಳೆಯರ ಉಪಸ್ಥಿತಿಯಲ್ಲಿ ತೊಟ್ಟಿಲು ಕಾರ್ಯಕ್ರಮ ಹಾಗೂ ಮರುದಿನ ರಥದ ಪೂಜೆ ನೆರವೇರಿಸಲು, ಎಲ್ಲಿಯೂ ಜನಜಂಗುಳಿ ನೆರೆಯದಂತೆ ಹಾಗೂ ಕೋವಿಡ್ ನಿಯಮಗಳ ಪಾಲನೆ ಆಗುವಂತೆ ನೋಡಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಶಾಸಕ ಶರಣು ಸಲಗರ, ತಹಶೀಲ್ದಾರ್ ಸಾವಿತ್ರಿ ಸಲಗರ, ಸಿಪಿಐ ಜೆ.ಎಸ್.ನ್ಯಾಮಗೌಡ, ಸಬ್ ಇನ್ಸ್ಪೆಕ್ಟರ್ ಗುರು ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ಜಗನ್ನಾಥ ಖೂಬಾ, ಸುಭಾಷ ಹೊಳಕುಂದೆ, ಬಸವರಾಜ ತೊಂಡಾರೆ, ರೇವಣಪ್ಪ ರಾಯವಾಡೆ ಉಪಸ್ಥಿತರಿದ್ದರು.