ಔರಾದ್: ಪಟ್ಟಣದಲ್ಲಿ ಈಚೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಜರುಗಿತು.
ಮುಖಂಡ ವಿಜಯಕುಮಾರ ಕೌಡಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,‘ಭಾರತವನ್ನು ಹಸಿವು ಹಾಗೂ ಅನಾರೋಗ್ಯ ಮುಕ್ತ ದೇಶವನ್ನಾಗಿಸಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ದಂಥ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದನ್ನು ಜನ ಇಂದಿಗೂ ಮರೆತಿಲ್ಲ’ ಎಂದು ಹೇಳಿದರು.
‘ರಾಜ್ಯ ಕೋವಿಡ್ ಸೋಂಕಿನಿಂದ ಮುಕ್ತವಾಗಬೇಕು ಎಂಬ ಕಾರಣದಿಂದ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮ ಜಾರಿಗೆ ತಂದಿದೆ. ಕೋವಿಡ್ ವಾರಿಯರ್ಸ್ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸೋಂಕಿನ ಕುರಿತು ತಿಳವಳಿಕೆ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ಡಾ.ಶಂಕರರಾವ ಮಾತನಾಡಿ,‘ಕೋವಿಡ್ ಸೋಂಕಿನ ಕುರಿತು ಯಾರೂ ಭಯ ಪಡಬಾರದು. ಇದು ಒಂದು ಸಾಮಾನ್ಯ ರೋಗ ಎಂದು ಪರಿಗಣಿಸಿದವರು ಬೇಗ ಗುಣಮುಖರಾಗುತ್ತಾರೆ. ರೋಗದ ಬಗ್ಗೆ ಹೆಚ್ಚಿನ ಭಯ ಹುಟ್ಟಿಸಿರುವುದು ಜನ ಸಾಯಲು ಕಾರಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಾರ್ವಜನಿಕರು ಕೋವಿಡ್ ಸೋಂಕಿತರನ್ನು ಕೀಳಾಗಿ ಕಾಣಬಾರದು. ಬದಲಾಗಿ ಅವರಲ್ಲಿ ಧೈರ್ಯ ತುಂಬಿ ರೋಗ ನಿಯಂತ್ರಿಸಲು ಸಹಕರಿಸಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಆನಂದ ಚವಾಣ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನೆಹರೂ ಪಾಟೀಲ, ಪ್ರಕಾಶ ಪಾಟೀಲ, ರಾಮಣ್ಣ ವಡೆಯರ್, ಅಂಜಾರೆಡ್ಡಿ, ಅನೀಲ ವಡೆಯರ್ ಹಾಗೂ ಅನೀಲ ನಿರ್ಮಳೆ ಇದ್ದರು.
ಕೋವಿಡ್ ವಾರಿಯರ್ಸ್ಗಳಿಗೆ ಆರೋಗ್ಯ ಹಸ್ತ ಕಿಟ್ ವಿತರಿಸಲಾಯಿತು.