ಚಿಟಗುಪ್ಪ: ‘ಬದುಕಿನಲ್ಲಿ ಯಾವುದೂ ಅಸಾಧ್ಯವಲ್ಲ. ಮನಸ್ಸು ಮಾಡಿದರೆ ಎಲ್ಲವನ್ನೂ ಸಾಧಿಸಬಹುದು ಎಂಬ ಸಂದೇಶವನ್ನು ಭಗೀರಥ ಮಹರ್ಷಿಗಳು ಸಮಾಜಕ್ಕೆ ನೀಡಿದ್ದಾರೆ’ ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್ ತಿಳಿಸಿದರು.
ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಗೀರಥರು ಸಾವಿರ ವರ್ಷ ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಒಂದು ಕಾರ್ಯ ಸಾಧನೆಗಾಗಿ ಎಲ್ಲವನ್ನೂ ತ್ಯಜಿಸಿ ಸಾವಿರ ವರ್ಷ ನಿರಂತರವಾಗಿ ಪ್ರಯತ್ನ ಮಾಡುವುದು ಮಾದರಿ. ಸಮಾಜಮುಖಿಯಾಗಿ ಕೆಲಸ ಮಾಡಲು, ಅಂದುಕೊಂಡಿದ್ದನ್ನು ಸಾಧಿಸಲು ಯುವಕರಿಗೆ ಭಗೀರಥರ ಪ್ರಯತ್ನ ಪ್ರೇರಣೆಯಾಗಬೇಕು’ ಎಂದು ಹೇಳಿದರು.
ಮುಖ್ಯಾಧಿಕಾರಿ ಹುಸಾಮೋದ್ದೀನ್ ಮಾತನಾಡಿ,‘ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂಥ ಮಹನೀಯರ ಸಂದೇಶಗಳನ್ನು ಕೇಳಿದಾಗ ಬದುಕಿಗೆ ಹೊಸ ಚೈತನ್ಯ ಬರುತ್ತದೆ. ಇನ್ನಷ್ಟು ಸಾಧನೆಗಳನ್ನು ಮಾಡಲು ಭರವಸೆ ಮತ್ತು ಧೈರ್ಯ ಬರುತ್ತದೆ’ ಎಂದರು.
ಪುರಸಭೆ ಸಿಬ್ಬಂದಿ ರವಿ ಸ್ವಾಮಿ, ವೈಶಾಲಿ, ರಾಜು ತೆಲಂಗ್, ಇಲಾಹಿ, ಧನರಾಜ್ ಹಾಗೂ ಗಣ್ಯರಾದ ಶಾಮರಾವ್ ಭುಲಾಳೆ ಇದ್ದರು.