ಔರಾದ್: ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ) ಕಾಮಗಾರಿ ಪರಿಶೀಲಿಸಿದರು.
ಖಾನಾಪುರ ಅರಣ್ಯ ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಮಾಡುವ ಸಿಸಿಟಿ ಕಾಮಗಾರಿ ಪರಿಶೀಲಿಸಿ ಕೆಲ ಹೊತ್ತು ಕಾರ್ಮಿಕರ ಜತೆ ಮಾತನಾಡಿಸಿದರು.
‘ಇಲ್ಲಿ ಕೆಲಸ ಮಾಡಲು ನಿಮಗೇನಾದರೂ ತೊಂದರೆ ಆಗುತ್ತಿದೆಯಾ, ಕೂಲಿ ಹಣ ಸಮಯಕ್ಕೆ ಸರಿಯಾಗಿ ಬರುತ್ತಿದೆಯಾ’ ಎಂದು ಕೇಳಿದರು.
’ನೀವು ನಿರಂತರ ಕೆಲಸ ಮಾಡಿದರೆ ನಿಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತದೆ. ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೆಲಸ ಮಾಡುವುದಕ್ಕಿಂತ ನಿಮ್ಮ ಊರಲ್ಲೇ ಉಳಿದು ಕೆಲಸ ಮಾಡಿದರೆ ತುಂಬಾನೇ ಅನುಕೂಲ. ಈ ನರೇಗಾ ಯೋಜನೆಯಲ್ಲಿ ರೈತರು ತಮ್ಮ ಹೊಲದಲ್ಲಿ ತಾವೇ ಕೆಲಸ ಮಾಡಿಕೊಂಡರೂ ಕೂಲಿ ಹಣ ಸಿಗುತ್ತದೆ’ ಎಂದು ಹೇಳಿದರು.
ಮೆಡಪಳ್ಳಿ ಕೆರೆಗೆ ಭೇಟಿ ನೀಡಿದ ಉಪ ಕಾರ್ಯದರ್ಶಿಗಳು ಕೆರೆ ಹೂಳೆತ್ತುವ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯ ಕಾಮಗಾರಿಯಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುದೇಶ್, ‘ತಾಲ್ಲೂಕಿನಲ್ಲಿ 2000 ಸಾವಿರಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೆಲಸ ಕೇಳಲು ಬಂದ ಎಲ್ಲರಿಗೂ ಕೆಲಸ ಕೊಡುವಂತೆ ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ, ಸುಭಾಷ ಬುಯ್ಯಾ, ನರೇಗಾ ತಾಂತ್ರಿಕ ಸಂಯೋಜಕ ಆನಂದ, ಸಿಇಸಿ ಸಂಯೋಜಕಿ ಓಶಿನ್ ಇದ್ದರು.