ಹುಮನಾಬಾದ್: ಪಟ್ಟಣದ ಐತಿಹಾಸಿಕ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಮಂಗಳವಾರ ಅವಕಾಶ ಮಾಡಿಕೊಡಲಾಯಿತು.
ಇಲ್ಲಿನ ಹಿರೇಮಠ ಸಂಸ್ಥಾನದ ರೇಣುಕ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಆವರಣದಲ್ಲಿ ಸಸಿಗೆ ನೀರುಣಿಸುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ನಂತರ ಮಾತನಾಡಿದ ಅವರು,‘ಭಕ್ತರು ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡಬೇಕು’ ಎಂದರು.
ಕೊರೊನಾ ತಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕು. ಮುಂಜಾಗ್ರತೆ ವಹಿಸಬೇಕು. ಪರಿಸರ ಸಂರಕ್ಷಣೆಗಾಗಿ ಮರ, ಗಿಡ ನೆಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಆರ್ಯ ಪ್ರತಿನಿಧಿ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ಅಷ್ಠೀಕರ ಅವರ ನೇತೃತ್ವದಲ್ಲಿ ಹೋಮ–ಹವನ ನಡೆಯಿತು.
ವಿಶ್ವ ಹಿಂದೂ ಪರಿಷತ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿವಶಂಕರ ತರನಳ್ಳಿ, ಇಂದುಮತಿ ಮಠ, ಕಲ್ಪನಾ, ಬಸವರಾಜ ಕಂದಗೋಳ, ಚಂದ್ರಕಾಂತ ಜಾಧವ, ಸದಾನಂದ ಖಮಿತ್ಕರ್, ಅನಂತ ರೆಡ್ಡಿ, ಶಿವರಾಯ್, ಅಶೋಕ ಕುಮಾರ ವಡ್ಡನಕೇರಿ, ನಿಜಲಿಂಗಪ್ಪ ಜಕ್ಕಾ, ವೆಂಕಟ ಜಾಧವ ಹಾಗೂ ಗೋವಿಂದ ತಿವಾರಿ ಇದ್ದರು.