ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕಾಗಿ ಮತದಾರರಿಗೆ ರಾಜಾರೋಷವಾಗಿ ಹಣ ಹಂಚುತ್ತಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಇಲ್ಲಿನ ಶಾಸಕ ಬಿ.ನಾರಾಯಣರಾವ್ ಜನಪರ ಕಾರ್ಯಗಳನ್ನು ಕೈಗೊಂಡು ಜನಾನುರಾಗಿ ಎನಿಸಿದ್ದರು. ಕೋವಿಡ್ ಲಾಕ್ಡೌನ್ನಲ್ಲಿ ಬಡವರಿಗೆ ಅಕ್ಕಿ ವಿತರಿಸುತ್ತ ಜನರ ಮಧ್ಯೆ ತಿರುಗಿದ್ದರಿಂದ ಕೋವಿಡ್ಗೆ ಬಲಿಯಾದರು’ ಎಂದರು.
‘ಇನ್ನುಳಿದ ಎರಡು ವರ್ಷಕ್ಕಾಗಿ ಅವರ ಕುಟುಂಬದವರಿಗೆ ಆ ಸ್ಥಾನ ಸಿಗಲಿ ಎಂಬ ನ್ಯಾಯ ಒದಗಿಸುವ ದೃಷ್ಟಿಯಿಂದ ಅವರ ಪತ್ನಿ ಮಾಲಾ ಬಿ.ನಾರಾಯಣರಾವ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಬಿಜೆಪಿ ವಾಮ ಮಾರ್ಗ ಹಿಡಿದಿದೆ’ ಎಂದು ಆರೋಪ ಮಾಡಿದರು.
‘ಮುಸ್ಲಿಂ, ಮರಾಠ, ಕೋಲಿ, ಕುರುಬ, ಲಿಂಗಾಯತ ಹಾಗೂ ಪರಿಶಿಷ್ಟ ಜಾತಿಯ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಹಿಂದೆ ಇದ್ದಾರೆ. ಶಿವಸೇನೆ ಅಭ್ಯರ್ಥಿ ಕೂಡ ನಮಗೆ ಬೆಂಬಲ ಸೂಚಿಸಿದ್ದರಿಂದ ಗೆಲುವು ಸುಲಭ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.