ಬೀದರ್: ಜಿಲ್ಲೆಯವರೇ ಆದ ಚಿತ್ರನಟ ಹಣ್ಮು ಪಾಜಿ ಅವರ 27ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಸೇರಿ ಒಟ್ಟು 27 ಜನ ರಕ್ತದಾನ ಮಾಡಿದರು.
ಮುಖಂಡರಾದ ನಾಮದೇವ ಸೋಳಂಕೆ, ಲೋಕೇಶ ಮರ್ಜಾಪುರ, ರಾಜೇಶ ಬುಯ್ಯಾ, ಚರಣಸಿಂಗ್, ನರಸಿಂಗ್ರಾಜ್, ಅನಿಲಕುಮಾರ, ಅನಿಲ್ ಸೋಳಂಕೆ, ಮಲ್ಲು ಗುಂಪಾ, ರಾಕೇಶ, ಬಾಬುರಾವ್ ಮೊದಲಾದವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಹಣ್ಮು ಪಾಜಿ ಅವರ ಜನ್ಮದಿನದ ಅಂಗವಾಗಿ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಯುವಕರು ಸಮಾಜಕ್ಕೆ ಏನನ್ನಾದರೂ ಕೊಡುಗೆ ಕೊಡಲು ಮುಂದೆ ಬರಬೇಕು ಎಂದು ಶಿಬಿರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಹೇಳಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವುದು ಕಂಡು ಬಂದಿತು. ಹೀಗಾಗಿ ತುರ್ತು ಅವಶ್ಯಕತೆ ಇರುವವರಿಗೆ ನೆರವಾಗಲು ಸ್ನೇಹಿತರು ಹಾಗೂ ಅಭಿಮಾನಿಗಳು ಸೇರಿ ರಕ್ತದಾನ ಮಾಡಿ, ತಮ್ಮ 27ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಸಂತಸ ಉಂಟು ಮಾಡಿದೆ ಎಂದು ಚಿತ್ರನಟ ಹಣ್ಮುಪಾಜಿ ನುಡಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಾರಣ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.
ರಕ್ತದಾನ ಮಾಡಿದವರು ಹಾಗೂ ರಕ್ತನಿಧಿ ಕೇಂದ್ರದ ಸಿಬ್ಬಂದಿಗೆ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಮುಖರಾದ ಅಕ್ಷಯಕುಮಾರ ರೆಡ್ಡಿ, ಬಸವರಾಜ ಶಹಾಪುರೆ, ಡಾ. ಮಹೇಶ ಶಹಾಪುರೆ, ಉಮೇಶ ಶಹಾಪುರೆ, ಗಣೇಶ ಕೃಷ್ಣ, ರಾಕೇಶ, ಅವಿನಾಶ, ರಾಜಶೇಖರ ಇದ್ದರು.