ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಸಾಹಿತ್ಯಕ್ಕೆ ಹಾರಕೂಡಶ್ರೀ ಕೊಡುಗೆ ದೊಡ್ಡದು

ಗ್ರಂಥಗಳ ಬಿಡುಗಡೆಗೊಳಿಸಿದ ಡಾ.ಸಂಗಮೇಶ ಸವದತ್ತಿಮಠ ಶ್ಲಾಘನೆ
Last Updated 1 ಜನವರಿ 2022, 7:32 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಚನ್ನವೀರ ಶಿವಾಚಾರ್ಯರು ನಾಲ್ಕು ಮಹತ್ವದ ಗ್ರಂಥಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಶ್ಲಾಘಿಸಿದ್ದಾರೆ.

ತಾಲ್ಲೂಕಿನ ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಬರೆದ `ಚೆನ್ನಕಾಂತ ವಿಚಾರ ಬಿಂದುಗಳು’ ಹಾಗೂ ಡಾ.ಚಿತ್ಕಳಾ ಮಠಪತಿ ರಚಿಸಿದ `ಘನಲಿಂಗದ ಬೆಳಗು’ ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಹಡಪದ ಅಪ್ಪಣ್ಣನವರ ನೂರೊಂದು ವಚನಗಳು, ಚೆನ್ನಚಿಂತನ, ಚನ್ನ ಚಂದ್ರಹಾರ ಚನ್ನವೀರ ಶಿವಾಚಾರ್ಯರ ಇದುವರೆಗಿನ ಕೃತಿಗಳಾಗಿವೆ. ಚೆನ್ನಕಾಂತ ವಿಚಾರ ಬಿಂದುಗಳು ಗ್ರಂಥದಲ್ಲಿ ವೈಚಾರಿಕ ದೃಷ್ಟಿಕೋನ, ಸಾಮಾಜಿಕ ಆಗುಹೋಗುಗಳ ಸಮರ್ಥ ವಿಶ್ಲೇಷಣೆಯಿದೆ. ಸಾಮಾನ್ಯ ವಿಷಯಗಳನ್ನೂ ಉತ್ತಮ ರೀತಿಯಲ್ಲಿ ಸಮಾಜದ ಎದುರು ಪ್ರಸ್ತುತಪಡಿಸಿದ್ದಾರೆ. ಸಾಕಷ್ಟು ಒತ್ತಡದ ಮಧ್ಯೆಯೂ ಬರವಣಿಗೆ ಕೈಗೊಂಡು ಉತ್ತಮ ಸಾಹಿತಿ ಎನಿಸಿಕೊಂಡಿದ್ದಾರೆ’ ಎಂದರು.

`ಶಿವಾಚಾರ್ಯರು ಸ್ವತಃ ಬರೆಯುವುದಷ್ಟೇ ಅಲ್ಲ; ಮಠದಿಂದ ಇದುವರೆಗೆ ನಾಡಿದ ಹಿರಿ-ಕಿರಿ ಸಾಹಿತಿಗಳ ನೂರಾರು ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆಗೈದಿದ್ದಾರೆ. ತತ್ವ ಪದಕಾರರು, ಕವಿ, ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಜಾತಿ ಮತ ಎಣಿಸದೆ ಸಕಲರಿಗೂ ಅವಕಾಶ ನೀಡಿದ್ದಾರೆ. ಲಿಂ.ಚನ್ನಬಸವ ಶಿವಯೋಗಿಗಳ ದಾರಿಯಲ್ಲಿ ಸಾಗಿ ಮಠದ ಕೀರ್ತಿ ಎಲ್ಲೆಡೆ ಹರಡಿಸಿದ್ದಾರೆ’ ಎಂದರು.

ಕಲಬುರಗಿ ಶರಣಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವರಾಜಶಾಸ್ತ್ರೀ ಹೇರೂರ ಮಾತನಾಡಿ, `ಬಸವಾದಿ ಶರಣರು ವಚನ ಸಾಹಿತ್ಯ ರಚಿಸುವ ಮೂಲಕ ಜನಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ್ದಾರೆ. ಮೂಢನಂಬಿಕೆಗಳನ್ನು ವಿರೋಧಿಸಿದ್ದಾರೆ. ಅವರ ತತ್ವವನ್ನು ಚನ್ನವೀರ ಶಿವಾಚಾರ್ಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಮಠವನ್ನು ಜ್ಞಾನ, ಅನ್ನ ದಾಸೋಹದ ಕೇಂದ್ರವನ್ನಾಗಿ ಮಾಡಿದ್ದಾರೆ’ಎಂದರು.

ಕಲಬುರಗಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಚಿತ್ಕಳಾ ಮಠಪತಿ ಮಾತನಾಡಿ, `ಸಾಹಿತ್ಯ ಮತ್ತು ಸಾಹಿತಿಗಳಿಗೆ ಶಿವಾಚಾರ್ಯರು ಪ್ರೋತ್ಸಾಹ ನೀಡಿದ್ದರಿಂದ ಅನೇಕರು ಬೆಳವಣಿಗೆ ಕಂಡಿದ್ದಾರೆ. ನನಗೂ ಸಹಕಾರ ನೀಡಿದ್ದರಿಂದ ಘನಲಿಂಗದ ಬೆಳಗು ಕೃತಿ ಪ್ರಕಟ ಆಗುತ್ತಿದೆ’ ಎಂದರು.

ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ಮುಖಂಡ ಚಂದ್ರಕಾಂತ ಪಾಟೀಲ ಶಿರಗಾಪುರ, ನಿವೃತ್ತ ಮುಖ್ಯಶಿಕ್ಷಕ ಪಿ.ಕೆ.ಹಿರೇಮಠ, ಸುಭಾಷ ಮುರೂಢ ಬೆಳಮಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೋಳಗಿ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ ಜನವಾಡಾ ಪಾಲ್ಗೊಂಡಿದ್ದರು. ರಾಜೇಶ್ರೀ ದಿಲೀಪಸ್ವಾಮಿ, ಶರಣಪ್ಪ ಜಮಾದಾರ ಸಂಗೀತ ಪ್ರಸ್ತುತಪಡಿಸಿದರು. ಅಂಬಾರಾಯ ಉಗಾಜಿನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT