ಬೀದರ್: ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಭಕ್ತರು ಈ ಬಾರಿ ಗುರುಪೂರ್ಣಿಮೆ ಮನೆಯಲ್ಲೇ ಆಚರಿಸಬೇಕು ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ಹೇಳಿದ್ದಾರೆ.
ಜುಲೈ 5 ರಂದು ಗುರುಪೂರ್ಣಿಮೆ ಇದೆ. ಬಹಳಷ್ಟು ಭಕ್ತರು ಗುರುಗಳಿಗೆ ಗೌರವ ಸಲ್ಲಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಕೊರೊನಾ ಸೋಂಕು ತಡೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಅವರವರ ಮನೆಗಳಲ್ಲೇ ಪೂಜೆ, ಪ್ರಾರ್ಥನೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಭಕ್ತರು ಕೊರೊನಾ ಮುಕ್ತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಬರುವ ದಿನಗಳಲ್ಲಿ ದೇವರು ಮಹಾಮಾರಿ ಕೊರೊನಾದ ಸಂಕಟವನ್ನು ನಿವಾರಿಸಲಿದ್ದಾನೆ ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಿಸಲು ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸೋಂಕಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಲಸಿಕೆ ಸಂಶೋಧನೆಯೂ ತೀವ್ರಗತಿಯಲ್ಲಿ ನಡೆದಿದೆ. ಅದು ಬರುವವರೆಗೂ ಹೆಚ್ಚು ಎಚ್ಚರ ವಹಿಸಬೇಕು. ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ಮಾಡಿದ್ದಾರೆ.