ಬೀದರ್: ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ಶೇ .65ರಷ್ಟು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದೃಢಪಡುತ್ತಿರುವುದರಿಂದ ಸೋಂಕಿತರೊಂದಿಗಿನ ಇತರರ ಸಂಪರ್ಕ ಪತ್ತೆ ಹಚ್ಚುವುದು ಅತ್ಯಂತ ಮಹತ್ವದ ಕೆಲಸವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದರು.
ವಾರ್ಡ್ವಾರು ಮತ್ತು ಗ್ರಾಮ ಪಂಚಾಯಿತಿವಾರು ಕೋವಿಡ್ 19 ಸಂಪರ್ಕ ಪತ್ತೆ ಹಚ್ಚುವ ಸಿಬ್ಬಂದಿಗೆ ಶುಕ್ರವಾರ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯಲೆಂದೇ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಾಳೆ ಮಾಡಿದರಾಯಿತು ಎನ್ನುವಂತಿಲ್ಲ. ಅದನ್ನು ತಕ್ಷಣವೇ ಮಾಡಬೇಕು ಎಂದು ಹೇಳಿದರು.
ಮಾರ್ಚ್ನಿಂದ ಈವರೆಗೆ ಎಲ್ಲರೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಸಂಪರ್ಕ ಪತ್ತೆ, ಗಂಟಲು ದ್ರವದ ಪರೀಕ್ಷೆ, ಹೋಮ್ ಕ್ವಾರಂಟೈನ್, ಹಲವು ಆ್ಯಪ್ಗಳ ನಿರ್ವಹಣೆ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಏರುಗತಿಯಲ್ಲಿತ್ತು. ಸಂಪರ್ಕ ಪತ್ತೆ ಹಚ್ಚುವ ಕಾರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಬಳಿಕ ತುಸು ನಿಯಂತ್ರಣಕ್ಕೆ ಬಂದಿತು. ಆದ್ದರಿಂದ ಸಂಪರ್ಕ ಪತ್ತೆ ಕಾರ್ಯವನ್ನು ಸಾಮಾಜಿಕ ಕಾರ್ಯವೆಂದು ಭಾವಿಸಿ ನಿರ್ವಹಿಸಬೇಕು ಎಂದು ಹೇಳಿದರು.
ರ್ಯಾಟ್ ಮತ್ತು ಆರ್ಟಿಪಿಸಿಆರ್ ಪರೀಕ್ಷೆ ನಡೆಸುವ ಮೂಲಕ ಕೋವಿಡ್ ಹರಡುವುದನ್ನು ತಡೆಗಟ್ಟಲು ಒತ್ತು ಕೊಡಲಾಗುತ್ತಿದೆ ಎಂದರು.
ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಬಳಸಿ ಸಂಪರ್ಕ ಪತ್ತೆ ಹಚ್ಚುವ ಕ್ರಮದ ಬಗ್ಗೆ ಜಿಲ್ಲಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.