ಹುಲಸೂರ: ಮಂಗಳವಾರ ತಡರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಅಳವಾಯಿ, ಹಲಸಿ ತುಗಾಂವ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಬ್ಬಿನ ಬೆಳೆ ನೆಲಸಮವಾಗಿದೆ ಎಂದು ಕೃಷಿ ಅಧಿಕಾರಿ ಧನರಾಜ ಹುಡುಗೆ ಮಾಹಿತಿ ನೀಡಿದ್ದಾರೆ.
ರೈತರ ಜಮೀನಿನಲ್ಲಿ ಬೆಳೆದ ಕಬ್ಬು ಮಳೆ, ಗಾಳಿ ಹೊಡೆತಕ್ಕೆ ಸಿಕ್ಕು ಸಂಪೂರ್ಣ ಹಾಳಾಗಿದೆ.
ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ತಡರಾತ್ರಿ ಸುರಿದ ಮಳೆಗೆ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ಇದರ ಜೊತೆಗೆ ಇತರ ಬೆಳೆಗಳಾದ ತೊಗರಿ, ಜೋಳ, ಮೆಕ್ಕೆಜೋಳ ಹಾಗೂ ಕಡಲೆ ಬೆಳೆದಿರುವ ರೈತರ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆ ಕೊಳೆಯುವ ಭೀತಿ ಎದುರಾಗಿದೆ.
ಮಳೆ ಹಾಗೂ ಭಾರಿ ಗಾಳಿಯಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಲವಾಯಿ ಗ್ರಾಮದ ರೈತ ಶರದ್ ಗಂದಗೆ ವಿನಂತಿಸಿಕೊಂಡಿದ್ದಾರೆ.